ಬುಧವಾರ, ಅಕ್ಟೋಬರ್ 23, 2024

ಏನ ಬಂದಿರಿ, ಹದುಳವಿದ್ದಿರೆ?

ಏನ ಬಂದಿರಿ, ಹದುಳವಿದ್ದಿರೆ? ಎಂದರೆ ನಿಮ್ಮೈಸಿರಿ ಹಾರಿಹೋಹುದೆ?
ʼಕುಳ್ಳಿರೆಂದರೆʼ ನೆಲ ಕುಳಿಹೋಹುದೆ?
ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು.
-- ಬಸವಣ್ಣ - Basavanna 

ಹೊಸತಾಗಿ ಜನ ಸಿಕ್ಕಾಗ ನಾವು‌ greet ಮಾಡುವುದೇ ಹೀಗೆ, "ಏನ್ರೀ, ಹೇಗಿದೀರ, ಏನ್‌ಸಮಾಚಾರ" ಅಂತ. ಏನು + ರೀ > ಏನುರೀ > ಏನ್ರೀ. ಏನೀ / ಏನ ಕೂಡ ಇದೇ ಸಾಲಿನ ಪದ.

೧. ಯಾರಾದರೂ ನೋಡಲು / ಮಾತಾಡಿಸಲು ಬಂದಾಗ, ದಾರಿಯಲ್ಲಿ ಸಿಕ್ಕಾಗ, ಕಡೇ ಪಕ್ಷ "ಏನು ಬಂದಿರಿ, ಹೇಗಿದೀರ, ಚೆನ್ನಾಗಿದೀರ, ಎಲ್ಲವೂ ಸರಿಯಾಗಿ (ಹದುಳ) ವಾಗಿದೆಯೇ, ನಿಮ್ ಕಡೆ ಮಳೆ ಬೆಳೆ ಹೇಗೆ?" ಎಂದು‌ ಕೇಳುವುದಕ್ಕೂ ಕೆಲವರು ಹಿಂದೆ ಮುಂದೆ ನೋಡುವರು. ಕೇಳಿದರೆ ಅವರ ಐಸಿರಿ (ಐಶ್ವರ್ಯ) ಹಾರಿ ಹೋಗದು.

೨. ದೂರದಿಂದ ನೋಡಲು‌ ಬಂದವರನ್ನು (ದಣಿದು ಬಂದಿರಬಹುದು) ನಿಲ್ಲಿಸಿಯೇ ಮಾತಾಡಿಸುವುದು ಅಗೌರವ ಎಂಬುದೇ‌ ಜನಪದರ ತಿಳುವಳಿಕೆ. ಬಂದವರಿಗೆ ರಾಜೋಪಚಾರ ಆ ಕಡೆ ಇರಲಿ, ಕಡೇ ಪಕ್ಷ ಬಂದವರನ್ನು ಕುಳಿತುಕೊಳ್ಳಿ ಎಂದಾದರೂ ಕೇಳಬೇಕು. ಕೂರಿ ಎಂದು ಕೇಳಿದರೆ ತಾವು ಕುಳಿತ ನೆಲದಲ್ಲೇನೂ ಕುಳಿ (ಗುಂಡಿ, ತಗ್ಗು) ಬೀಳದು, ನೆಲವೇನೂ ಕುಸಿದುಹೋಗದು!

೩. ಕೇಳಿದ‌ "ಕೂಡಲೇ‌" ಮರು ನುಡಿಯಲೂ ಕೆಲವರಿಗೆ ಆಲಸ್ಯ, ಉಡಾಫೆ, ನಾನ್ಯಾಕೆ ಉತ್ತರಿಸಬೇಕು ಎಂಬ ಸೊಕ್ಕು, ನಾನೆಲ್ಲಿ‌ ಕೀಳಾಗ್ತೀನೋ ಅನ್ನೋ ಕೀಳರಿಮೆ. ಒಡನೆ / ಕೂಡಲೇ ಮರು ನುಡಿದರೆ ತನ್ನ ತಲೆಯೂ ಸಿಡಿಯದು, ಹೊಟ್ಟೆಯೂ ಸೀಳದು!

೩. ಬಂದವರಿಗೆ / ಕೇಳಿದವರಿಗೆ ಒಂದುಕಡೆ ಏನನ್ನೂ ಕೊಡಲಾಗದಿದ್ದರೂ ಪರವಾಗಿಲ್ಲ,  ಒಳ್ಳೆಯ ಗುಣವಾದರೂ (ಏನ್ರೀ ಹದುಳವೇ ಎಂಬ ಮಾತು, ಕೂರಿ ಎಂಬ ನಲ್ ನಡವಳಿಕೆ, ಕೇಳಿದ ಮಾತಿಗೆ ಕೂಡಲೇ ಮರುನುಡಿಯುವ ಸೌಜನ್ಯ) ಇರಬೇಕು. ಈ ಗುಣ ಇರದಿದ್ದರೆ‌ ಅಂತವರನ್ನು ಕೆಡವಿ ಮೂಗ ಕೊಯ್ವ ಕೂಡಲಸಂಗಯ್ಯ ಎನ್ನುವರು ಬಸವಣ್ಣ. 

These are minimum expections from a human being. ಈ ಗುಣಗಳು ಎಲ್ಲ ಮನುಷ್ಯರಿಗೂ ಇರಲೇ ಬೇಕು. ಸ್ವಸ್ತಸಮಾಜಕ್ಕೆ ಸ್ವಸ್ಥ ಮನಗಳು ಬೇಕು. ಬಸವಣ್ಣ ಕಟ್ಟಿದ ಸ್ವಸ್ಥ ಸಮಾಜದ ಬೇರುಗಳು ಈ ಗುಣಗಳು.

ಪದಗಳ ಬಗ್ಗೆ: 
ಪದ / ಹದ ಗಳೆರಡೂ ಒಂದೇ. ಹಳಗನ್ನಡದ ಪದವೇ ನಡುಗನ್ನಡದ ನಂತರ ಹದ ವಾಗಿದೆ. ಅಚ್ಚಗನ್ನಡ ಪದ. 

ಪದ : proper or good state or condition, proper degree or temperature, the seasoning of any food, the right degree of ripeness, keenness of edge or sharpness; 
ಪದನು‌/ ಹದನು:  properness, etc.;
ಬಳಕೆ: ‌ಹದ ಮಾಡಿದ ಮಜ್ಜಿಗೆ: 

ಪದುಳ :  well-being, prosperity, happiness, tranquillity, security, safety;  ಪದುಳಿಗ : A happy man;  ಪದುಳೀರ್ : to cheer up, become tranquil;  ಪದುಳಿಸು:  to become well or happy, be calmed or soothed, feel refreshed, recover one's strength;

ಸುಶ್ರುತ ಆರೋಗ್ಯದ ಬಗ್ಗೆ ಈತರ ಹೇಳುತ್ತಾನೆ. 
ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ 
ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ

ಮೂರು ದೋಷಗಳು, ಹದಿಮೂರು ಅಗ್ನಿಗಳು, ಏಳು ಧಾತುಗಳು ಸರಿಯಾದ ಪ್ರಮಾಣದಲ್ಲಿ‌ ಇರಬೇಕು. ಹೊರಹೋಗುವುದು, ಹತ್ತು ಇಂದ್ರಿಯಗಳು, ಮನಸ್ಸು ಪ್ರಸನ್ನ / ತಿಳಿಯಾಗಿರಬೇಕು. ಇದನ್ನು ಸ್ವಸ್ಥ (~  ಸ್ವಃ + ತ -  ತನ್ನ ಸಹಜ ನೆಲೆಯಲ್ಲಿರುವುದು) ಎನ್ನುವರು. ಸ್ವಸ್ಥ ವಾಗಿರುವಿಕೆಯೇ ಸ್ವಾಸ್ಥ್ಯ. 

Health ಗೆ #ಹದುಳ ಅಚ್ಚಗನ್ನಡ ಪದ. ಎಲ್ಲವೂ ಹದವಾಗಿರುವುದೇ (ಎಷ್ಟು ಇರಬೇಕೋ ಅಷ್ಟು ಮಾತ್ರ - ಹೆಚ್ಚೂ ಅಲ್ಲ‌ ಕಡಿಮೆಯೂ ಅಲ್ಲ) ಆರೋಗ್ಯ ಎನ್ನುವುದು ಭಾರತೀಯರ ಕಲ್ಪನೆ. ಹದುಳ ಎಂದರೂ ಇದೇ. ಎಲ್ಲವೂ ಹದವಾಗಿ (ಸಮ ಸ್ಥಿತಿಯಲ್ಲಿ) ಇರುವುದು.

ಗುರುವಾರ, ಅಕ್ಟೋಬರ್ 10, 2024

ಇದ್ದವನ ಸುದ್ದಿಯ ಸತ್ತವ ಹೇಳಿ ಕಾಣದವ ಕೇಳಿ ಹೋದ

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷದ ರಸದ ಭಾವಿ ಹುಟ್ಟಿತ್ತು. 
ಆ ಭಾವಿಯೊಳಗೆ ಕಬ್ಬಿಣದ ಅದುರು ಹುಟ್ಟಿ ಸಿದ್ಧರಸವ ನುಂಗಿತ್ತು. 
ಇದ್ದವನ ಸುದ್ದಿಯ ಸತ್ತವ ಹೇಳಿ ಕಾಣದವ ಕೇಳಿ ಹೋದ. 
ಸದಾಶಿವಮೂರ್ತಿ ಲಿಂಗ ಬಚ್ಚ ಬಯಲು. 
:: ಅರುವಿನ ಮಾರಿತಂದೆ ಯ #ಬೆಡಗಿನ‌ವಚನ

ಟೀಕುಃ-- 
• ಬ್ರಹ್ಮರಂಧ್ರದ ಸಹಸ್ರದಳ ಕಮಲಕರ್ಣಿಕಾ ಮಧ್ಯದಲ್ಲಿ ಎಂಬುದೀಗ ಶ್ರೀಶೈಲದ ಮಧ್ಯದಲ್ಲಿ ಎಂಬ ಶಬ್ದಕ್ಕರ್ಥ.
• ಆ ಬ್ರಹ್ಮರಂಧ್ರದ ಸ್ಥಾನದಲ್ಲಿ ಪವಿತ್ರಸ್ವರೂಪವಾದ ಪರಮಾಮೃತ ಕೂಪ ಉದಿಸಿತ್ತಂಬುದೀಗ ಪರುಷ ರಸದ ಬಾವಿ ಹುಟ್ಟಿತ್ತೆಂಬ ಶಬ್ದಕೃರ್ಥ. 
• ಆ ಪರಮಾಮೃತ ಕೂಪವನೊಳಕೊಂಡಿರ್ಸ ಚಿದ್ಘನ ಲಿಂಗದಿಂದೆ ಅಜ್ಞಾನ ಸಂಬಂಧವಾದ ದೇಹಭಾವ ತೋರಿತ್ತು ಜೀವಂಗೆಂಬುದೀಗ 'ಆ ಭಾವಿ ಯೊಳೆಗೆ ಕಬ್ಬುಣದ ಅದರು ಹುಟ್ಟಿ' ಎಂಬ ಶಬ್ದಕ್ಟರ್ಥ. 
• ಅಂತಪ್ಪ ' ದೇಹವು ಆ ಪರಮಾಮೃತ, ರಸ ಬಿಂದುವ ನೊಳಕೊಂಡಿಹುದೆಂಬುದೀಗ 'ಸಿದ್ಧರಸವ ನುಂಗಿತ್ತು' ಎಂಬ ಶಬ್ದಕ್ಕರ್ಥ. 
• ಇಂತಪ್ಪ ದೇಹ ಸಂಬಂಧಿಯಾಗಿರ್ದ ಆತ್ಮಂಗೆ ಶಿವಕೃಪೆಯಿಂ ಸುಜ್ಞಾನೋದುಯವಾಗಲು ಕ್ರಿಯಾಘನ ಗುರುವಾಗಿ ಬಂದು ಅಂಗಕ್ಕೆ ಲಿಂಗಸಂಬಂಧವ ಮಾಡಿ ತನ್ನಾದಿಯನೆಚ್ಚರಿಸಿ ಸುಜ್ಞಾನ ಭೋಧೆಯ ಕೇಳಿ ಆ ಗುರುಮಾರ್ಗಾಚಾರವಿಡಿದು ಶಿವತತ್ವದತ್ತಲೆಯ್ದುತ್ತಿರ್ದನೆಂಬುದೀಗ ಕಾಣದವ ಕೇಳಿ ಹೋದ ಸದಾಶಿವಮೂರ್ತಿಲಿಂಗ ಬಚ್ಚ ಬಯಲು ಎಂಬ ಶಬ್ದಕ್ಕರ್ಥ.

ಸೆಲೆ: ಫಗು ಹಳಕಟ್ಟಿಯವರ "ಶಿವಶರಣರ ಸಂಕೀರ್ಣ ವಚನಗಳು" ಕೃತಿಯಿಂದ.

ಬುಧವಾರ, ಅಕ್ಟೋಬರ್ 09, 2024

ಕೂಡಲಸಂಗನ ಕೂಡುವ ಕೂಟ

"‌‍‍ನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿ,
ಆ ನಡೆನುಡಿ ಎರಡರ ಚೆನ್ನ ಮೃಡ ನಿಮ್ಮೊಳಗಡಗಿಸಿ, 
ತಾವೆಡೆಯಿಲ್ಲದೆ ಪರಿಪೂರ್ಣರಾದವರ ಪಡುಗವ ಹೊರುವೆ, ಪಾದರಕ್ಷಯ ಹಿಡಿವೆ. 
ಎನಗಿದೆ ಮಾಟ, ಬಯಸುವ ಬೇಟ. ಕೂಡಲಸಂಗಮದೇವಾ, ಇದು ನಿಮ್ಮ ಕೂಡುವ ಕೂಟ.". ---- #ಬಸವಣ್ಣ‌

ಇನ್ಯಾರ್ದೋ ಗೋಡೆನಲ್ಲಿ ಈ ವಚನ ನೋಡಿದೆ. ಒಂದೆರಡು ಕಾರಣಗಳಿಂದ ಈ ವಚನ ಇಷ್ಟ ಆಯ್ತು.‌ಹಾಗಾಗಿ ಎರಡು ಮಾತುಗಳು. ಅನುಭಾವ ಸಾಹಿತ್ಯವಾದ ವಚನಗಳಿಗೆ ನಿರ್ವಚನ‌ ಮಾಡುವುದು ತಪ್ಪು ಅಂತಾನೆ ನನ್ನ ಅನಿಸಿಕೆ.. ಇದಕ್ಕೆ ನಾನು  ಎರಡು ಕಾರಣಗಳನ್ನ ಕೊಡ್ತೀನಿ.

೧. ವಚನಗಳು ಸರಳ ಅಡುನುಡಿಯಲ್ಲಿವೆ.. ನೇರವಾಗೇ ಓದಬಹುದು. ಇನ್ನೂ ಸರಳ ಮಾಡುವ ಪ್ರಯತ್ನ ಮಾಡಿದರೆ ನಮ್ಮ ನಂಬಿಕೆ‌ ಅನಿಸಿಕೆಗಳನ್ನೆಲ್ಲ ತುರುಕಿದಂತಾಗುತ್ತೆ.
೨. ಇದು ಅನುಭಾವ ಸಾಹಿತ್ಯ. ನಮ್ಮ ಅನುಭವಕ್ಕೆ (ಪದಗಳು ಅರ್ತವಾದ್ರೂ) ಅಷ್ಟು ಸುಲಭಕ್ಕೆ ಸಿಕ್ಕದೇ ಇರಬಹದು.. ಅನುಭಾವ ಸಾಹಿತ್ಯ ವನ್ನ ಶುಷ್ಕ ತರ್ಕ ದೊಳಗೆ ತರೋದು ಎಷ್ಟು ಸರಿಯೋ‌ ತಿಳಿಯದು. 
೩. Spiritual domain ( ಅನುಭಾವದ ನೆಲೆಗಟ್ಟಿನ) ಕಲಿಕೆಯನ್ನ / ಅನುಭವ ವನ್ನ Cognitive domain (ತಿಳಿವಿನ ನೆಲಗಟ್ಟು) ನಲ್ಲಿ ಎಷ್ಟರ ಮಟ್ಟಿಗೆ ಅರ್ತ ಮಾಡ್ಕೋಬಹುದೋ ತಿಳೀದು.

ಆದ್ರೂ ಎರಡು ಮಾತು... 

ನಡೆದು ತೋರಿದರೆ ನುಡಿ ಚನ್ನ;  ನುಡಿದು ತೋರಿದರೆ ನಡೆ ಚನ್ನ 
ಎನ್ನುವಲ್ಲಿ ನಡೆ ನುಡಿ ಒಂದೇ ಇರಬೇಕು   ಅನ್ನುವ ಅರ್ತ ಬರುತ್ತೆ. ನಡೆ ನುಡಿಗಳೆರಡೂ ಚನ್ನಿದ್ದರೆ ಕೂಡಲ ಸಂಗಯ್ಯ ನಮ್ಮೊಳಗಿರ್ತಾನೆ, ಅಂತ‌ ಪರಿಪೂರ್ಣರ ಪಡುಗ ( ಉಗುಳುಗುವ ಪಾತ್ರೆ) ಹೊರಲೂ ಸಿದ್ದ, ಪಾದರಕ್ಷೆ ( ಚಪ್ಪಲಿ) ಹಿಡಿಯಲೂ ಸಿದ್ದ ಅನ್ನುವುದ ಬಸವಣ್ಣನ ನಿಲುವು. ಅಂತರಂಗ ಬಹಿರಂಗ ಶುದ್ದಿ ಯ ನಿಲುವು ಇದು. 

ಮಾಡುವುದರಿಂದ ಮಾಟ (ಕೆಲಸ);   ಬೇಡುವುದರಿಂದ ಬೇಟ;  ಕೂಡುವುದರಿಂದ ಕೂಟ. 

ಮಾಟ ಬೇಟ ಕೂಟಗಳನ್ನ ಎರಡು ನೆಲೆಗಳಲ್ಲಿ ಅರ್ತ ಮಾಡ್ಕೋಬಹುದು.

(೧) ಗಂಡು ಹೆಣ್ಣಿನ ನೆಲೆಯಲ್ಲಿ   ಮತ್ತು  
(೨) ಶರಣ ಸತಿ ಲಿಂಗ ಪತಿ ನೆಲೆಯಲ್ಲಿ.

"ಕ್ರಿಯಾಜ್ಞಾನ ಸಂಯುಕ್ತಂ ವೀರಶೈವಸ್ಯ ಲಕ್ಷಣಂ" ಅನ್ನೋದು ಒಂದು ಮಾತು.‌
ಇಲ್ಲಿ‌ ಕ್ರಿಯೆ > ಇಷ್ಟಲಿಂಗ‌ಪೂಜೆ ಇತ್ಯಾದಿಗಳು
ಜ್ಞಾನ > ಅಷ್ಟಾವರಣ, ಷಟ್ ಸ್ತಲ, ಇನ್ನೂ ಮುಂತಾದವುಗಳ ಜ್ಞಾನ.

ಮಾಟ > ಮಾಡುವ ಕಾಯಕ / ಕ್ರಿಯೆ
ಬಯಕೆ> ನಿರ್ವಾಣ, ಬಯಲು ಐಕ್ಯ ಆಗುವ ಬಯಕೆಗಳು
ಕೂಟ > ಬಯಲು, ಐಕ್ಯ 

ಬಸವಣ್ಣ ಇವುಗಳಾಚೆ ಬಂದು ' ಎನ್ನಂತವನಿಗೆ' ಪರಿಪೂರ್ಣರ ಸೇವೆಯೇ ಸಂಗವೇ ಕೆಲಸ / ಕ್ರಿಯೆ, ಇದೇ "ಎನ್ನ ಬಯಕೆ ಇದೇ 'ಎನಗೆ' ಕೂಡಲ ಸಂಗಯ್ಯ ನನ್ನು ಕೂಡಲು ಇರುವ ದಾರಿ" ಎನ್ನತ್ತಾರೆ.

ತಾವೇ ಕಟ್ಟಿದ ಸಿದ್ದಮಾದರಿಗಳನ್ನು‌ ಒಡೆಯುವ ಪರಿ‌ವಚನಕಾರರಿಗಷ್ಟೇ ಸಾದ್ಯ

ಭಾನುವಾರ, ಅಕ್ಟೋಬರ್ 06, 2024

ಪರಿಭವವ ಮರೆದೆಯಲ್ಲಾ, ಮನವೇ!

ಮನವೇ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೇ!
ಲಿಂಗವ ನಂಬು ಕಂಡಾ, ಮನವೇ;  
ಜಂಗಮವ ನಂಬು ಕಂಡಾ, ಮನವೇ;
ಕೂಡಲಸಂಗಮದೇವರ ಬಿಡದೆ ಬೆಂಬತ್ತು, ಕಂಡಾ, ಮನವೇ.  
                              -- #ಬಸವಣ್ಣ - Basavanna 

ಇಹಪರಗಳೆರಡರಲ್ಲೂ ಸಲ್ಲುವುದೇ ಶರಣಧರ್ಮದ  ಪರಮೋದ್ದೇಶ. #ಕಾಯಕ #ದಾಸೋಹ ತತ್ವಗಳು, ಕಳಬೇಡ‌ ಕೊಲಬೇಡ ಮುಂತಾದ ಬದುಕಿನ ಸೂತ್ರಗಳು "ಇಹದಲ್ಲಿ ಸಲ್ಲುವ ದಾರಿ" ಗಳಾದರೆ, "ಪರದಲ್ಲಿ ಸಲ್ಲಲು‌‌" ಇರುವ ಏಕೈಕ ದಾರಿ #ಲಿಂಗಾಂಗಯೋಗ. 

ಭವಿ-ಭಕ್ತ, ಇಹ-ಪರ, ಇಲ್ಲಿ-ಅಲ್ಲಿ ಪದಗಳಂತೆ ಅರಿವು-ಮರೆವು ಗಳು ಶರಣರು ಬಳಸುವ ಎರಡು ವಿರುದ್ದ ಕಲ್ಪನೆಗಳು. ಮೋಡ  ಸೂರ್ಯ(ಅರಿವು) ನನ್ನು 'ಕೆಲಕಾಲ' 'ಮರೆ'ಮಾಡಿದಂತೆ ಈ‌ ಮರೆವು.

ಜಂಗಮ ಕಾಣದ ಶಕ್ತಿ. ಆ ಜಂಗಮವೇ ಕುರುಹಾಗಿ (symbol ಆಗಿ) ಕಾಣುವಂತೆ ಬಂದದ್ದು ಲಿಂಗ. ಮುಕ್ತಿಗೆ ಮಾರ್ಗ‌ ಲಿಂಗಜಂಗಮಗಳನ್ನು ನಂಬುವುದೇ! ಇಹದಲ್ಲಿನ ಲಿಂಗಾಂಗ ಸಾಮರಸ್ಯ ಪರದಲ್ಲಿ ಲಿಂಗೈಕ್ಯವ ನೀಡುವುದು. ಮರೆಯದೆ ಧೃತಿಗೆಡದೆ ದಾರಿತಪ್ಪದೇ ನಿಷ್ಠೆಯಿಂದ ಕೂಡಲ ಸಂಗಯ್ಯನ ಬೆನ್ನು ಹತ್ತು‌ (ಲಿಂಗಪೂಜೆ / ಶಿವಯೋಗದಲ್ಲಿ ತೊಡಗು) ಆಗ ಈ ಪರಿಭವಗಳು ನೀಗುವವು ಎನ್ನುವರು ಬಸವಣ್ಣ. ಇದನ್ನು‌ ಮಾಡದಿದ್ದಕ್ಕೇನೇ ಹಿಂದಿನ ಪರಿಭವಗಳು‌ ಉಂಟಾದವು ಎಂಬುದನ್ನು ಮರೆಯದಿರು ಮನವೇ ಎನ್ನುವರು‌.
---
ಪರಿಭವ ಎಂದರೆ ಮರುಹುಟ್ಟು / ಪುನರ್ಜನ್ಮ. ಆತ್ಮನು ನಾನಾ ಯೋನಿಗಳಲ್ಲಿ ಸಾಗುತ್ತಾ ಅಲೆಯುವ ಪರಿಪಾಟಲು. ಪರಿಭವಸುಖಕ್ಕೆ‌ ಈಡಾಗು, ಪರಿಭವಕ್ಕೆ ಒಳಗಾಗು, ಪರಿಭವಕ್ಕೆ ಗುರಿಯಾಗು ಮುಂತಾದ ಪದಗಳನ್ನು, ಪರಿಭವದ ತಡಿ, ಪರಿಭವದಲ್ಲಿ ತೊಳಲು, ಪರಿಭವಭಾದೆ ಮುಂತಾದವನ್ನು, ಪರಿಭವವ ದಾಟಿಸು, ಪರಿಭವಂಗಳ ಅಳಿವು, ಪರಿಭವಂಗಳ ನೀಗು ಮುಂತಾದ ಪದಗಳನ್ನು ಶರಣರು ಮತ್ತೆ ಮತ್ತೆ ಬಳಸುವರು.

ನಿಮ್ಮನರಿದು ತನ್ನ ಮರೆದ ಪರಮ ಶಿವಯೋಗಿಗೆ ಪರಿಭವಂಗಳುಂಟೆ ಗುಹೇಶ್ವರಾ? ಎನ್ನುವರು ಪ್ರಭುದೇವರು. ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ ಎನ್ನುವರು ಸಿದ್ದರಾಮೇಶ್ವರ. ಎನ್ನ ಪರಿಭವವ ತಪ್ಪಿಸಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ ಎನ್ನವರು ಷಣ್ಮುಖ ಸ್ವಾಮಿ.

ಕರ್ಮದಿಂದವು ಮನಸ್ಸು ಜ್ಞಾನವಿಲ್ಲದ ಭ್ರಮೆಯಿಂದವು, ತನುವಿನ ದೆಸೆಯಿಂದಲು ನಾನಾ ಪರಿಭವಂಗಳಲ್ಲಿ ಬಂದೆನಯ್ಯ ಎನ್ನುವನು ಶೂನ್ಯನಾಥಯ್ಯ. ಲಿಂಗಭಕ್ತಿಯನರಿಯದೆ, ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.


ಶನಿವಾರ, ಅಕ್ಟೋಬರ್ 05, 2024

ಸಂಗೀತಕ್ಕೆ ಶಿವಶರಣರ ಕೊಡುಗೆ

ಸಂಗೀತಕ್ಕೆ ಶಿವಶರಣರ ಕೊಡುಗೆ

ಪ್ರೊ|| ಮಲ್ಲಿಕಾರ್ಜುನ ಮನಸೂರ

ಕನ್ನಡ ನಾಡಿನ ಶಿವಶರಣರು ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳ ಮೂಲಕ ಈಶ್ವರ ಸೇವೆಸಲ್ಲಿಸಿ ಭಕ್ತರರನ್ನು ತಣಿಸಿ, ಇಹಪರಗಳಿಗೂ ಪೂಜ್ಯರಾಗಿದ್ದಾರೆ. ಅವರು ಆಶ್ರಯಿಸಿದ್ದು ಜನತೆಯನ್ನು; ಆದುದರಿಂದ ಜನತೆಯ ಭಾಷೆಯನ್ನು ಸಾಹಿತ್ಯಕ್ಕೆ ಬಳಸಿದಂತೆ, ಜನತೆಯ ಕಲೆಗಳಾದ ಹಾಡು, ಕುಣಿತಗಳನ್ನು, ವೇಷಗಳನ್ನು, ಭಕ್ತಿಯಕಾಯಕಗಳನ್ನಾಗಿ ಪರಿವರಿಸಿಕೊಂಡು ಈಶ್ವರಾನುಗ್ರಹ ಸಂಪಾದಿಸಿದರು. ಅವರು ಈ ಕಲೆಗಳನ್ನು ಬಳಸಿದ್ದು, ಬೆಳೆಸಿದ್ದು ಉದರ ಪೋಷಣೆಗೆ ಮಾತ್ರವಲ್ಲ; ದೈವದಶಕ್ತಿಯಾದ ಕಲಾಪ್ರತಿಭೆಯನ್ನು ಸಮಾಜೋದ್ಧಾರ, ಲೋಕಕಲ್ಯಾಣಕ್ಕಾಗಿ; ಅದರಿಂದಾಗಿ ದೈವದ ಪೂಜೆಗೆಂದು ಅವುಗಳನ್ನು ಬಳಸಿಕೊಂಡುದು ಗೋಚರಿಸುತ್ತದೆ. ಕಾವ್ಯಕಲೆಯನ್ನು ವೀರಶೈವ ಶರಣರು 'ನರಸುತ್ತಿ'ಗೆ 'ಉದರ ಪೋಷಣೆ'ಗೆ 'ಕೀರ್ತಿ ವಾರ್ತೆಲಾಭ'ಗಳಿಗೆ ಬಳಸಿಲ್ಲ. ಈ ತತ್ತ್ವವೇ ಇತರ ಕಲಾವಿದರಿಗೂ ಅನ್ವಯಿಸುತ್ತದೆ. ಕಲಾವಿದರಲ್ಲಿ ಕವಿಗಳು ಮತ್ತು ವಚನಕಾರರಾದ ಶಿವಶರಣರು ಇದ್ದಾರೆ. 'ದೇಶೀ' ಮತ್ತು 'ಮಾರ್ಗ' ಎರಡರಲ್ಲಿಯೂ ಅವರ ಕೊಡುಗೆ ಮಹತ್ವವಾದುದು, ಇವರ ಕಲಾಭಿರುಚಿ ನೃತ್ಯ ದಲ್ಲಿಯೂ ಕಂಡು ಬರುತ್ತದೆ. ಕಲೆಗಳನ್ನು ಪ್ರಯೋಗಗಳ ಮೂಲಕ ಪ್ರದರ್ಶಿಸುತ್ತಿದ್ದುದು ಮಾತ್ರವಲ್ಲದೆ ಕೆಲವರು ಈಬಗೆಗೆ ಶಾಸ್ತ್ರ ಗ್ರಂಥಗಳನ್ನು ರಚಿಸಿದ್ದಾರೆ. ಶರಣರು ರಚಿಸಿದ 'ವಚನ', 'ಗೀತ', 'ಜಾನಪದ ಹಾಡು', 'ಒನಕೆವಾಡು', 'ಯಕ್ಷಗಾನ', 'ಸಣ್ಣಾಟ' (ಶರಣರಾಟ) ಇವೆಲ್ಲವುಗಳನ್ನು ಹಾಡುವುದು ಒಂದು ರೀತಿಯಲ್ಲಿ 'ಜಾನಪದ ಸಂಗೀತ'ಕ್ಕೆ ಕೊಟ್ಟ ಕೊಡುಗೆಯೆಂದೇ ಹೇಳಬೇಕು, ಶಿವಶರಣರ ಕಥೆಗಳನ್ನು ನಾಡಿನಲ್ಲಿ ಹಲವು ಕಲಾಮಾಧ್ಯಮದ ಮೂಲಕ ಪ್ರಸಾರಮಾಡುತ್ತಿದ್ದರೆಂಬುದಕ್ಕೆ ಬಸವಪುರಾಣ ದ ಈ ಕೆಳಗಿನ ಪದ್ಯವನ್ನು ನೋಡಬಹುದು. ಸಿರಿಯಾಳಶೆಟ್ಟಿಯಿಂದಲೇ ಶಿವ ಭಕ್ತಿ ಹುಟ್ಟಿತಂತೆ! 
"ಇಳಿಯೊಳಾ ಸಿರಿಯಾಳ ಸೆಟ್ಟಿಯ ತಲೆಯಲೇ ಶಿವಭಕ್ತಿ ಹುಟ್ಟಿತು : '
ಸರಸ ಭಾಷಾಂಗ ಕ್ರಿಯಾಂಗೋತ್ಕರದ ಗದ್ಯ ಪದ್ಯವಿಸರ ಮಧುರ ಗೀತೋಕ್ತಿಯಿಂ, 
ಸಲೆ ದೇಶ ದೇಶದಲಿ, ಕರಂ ಎಸೆಯಲು ಊರೂರೊಳು ಅತಿ ಶುಭಕರಮೆನಲು 
ಸಿರಿಯಾಳ ಚರಿತೆಯ ನೆರೆಹೊರೆದು ವಿರಚಿವರು ಭಕ್ತಿ ಸಭಾಂತರಾಳದೊಳು' 

ಸಿರಿಯಾಳನ ಕಥೆ ಎಷ್ಟೊಂದು ಜನಪ್ರಿಯವಾಗಿತ್ತೆಂಬುದನ್ನು, ಆ ಕಥೆಯನ್ನು ಜನರಲ್ಲಿ ಪ್ರಸಾರ ಮಾಡಲು ಕಾವ್ಯ ನಾಟಕ ಗದ್ಯಪದ್ಯ, ಮಧುರಗೀತೆಕ್ತಿ ಬಳಸಿದುದನ್ನು ನಾವೆಲ್ಲ ಕಾಣುತ್ತೇವೆ; 'ಸತಿಯರು ಮನೆ ಮನೆಗೆ ಒನಕೆವಾಡು ಪಾಡುವರು' ಎಂದಿದ್ದಾನೆ ಭೀಮಕವಿ, ಇಲ್ಲಿ 'ದೇಸಿ' 'ಮಾರ್ಗ' ಸಂಗೀತಗಳ ಪ್ರಸ್ತಾಪವೂ ಇರುವುದನ್ನು ಗಮನಿಸುತ್ತೇವೆ.



ಕರ್ನಾಟಕದ ಜನ ಎಂದಿನಿಂದಲೂ ಸಂಗೀತ ಪ್ರಿಯರು, ಪಂಪ ಕವಿ ಆಡಿದ ಮಾತು : “ಚಾಗದ ಭೋಗದ, ಗೇಯದ ....  ಮಾನಿಸರೆ ಮಾನಿಸರು" ಎಂಬುದು, ಇಂಪನಾಳ್ದ ಗೇಯಂ ಕಿವಿವೊಕ್ಕೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ'-
ಎಂಬುದು, ಕನ್ನಡಿಗರ ಸಾಂಸ್ಕೃತಿಕ ಜೀವನದ ಮನೋಧರ್ಮವನ್ನು ಸೂಚಿಸುತ್ತದೆ. ಸಂಗೀತವನ್ನು ಕೇಳುವುದು, ಕನ್ನಡಿಗರ ಮನೋಧರ್ಮ, ಶಿವಶರಣರ ಪೂರ್ವದಲ್ಲಿಯೂ ಅನೇಕ ಸಂಗೀತಗಾರರ ಹೆಸರುಗಳು ನಮಗೆ ದೊರೆಯುತ್ತವೆ. 'ಶಾಂತರ' ಎಂಬ ದೊರೆಯು ಸಂಗೀತದಲ್ಲಿಯೂ ಚತುರನಾಗಿದ್ದನು. 'ಪಿರಿಯಕೇತಲದೇವಿ' ಎಂಬವಳಿಗೆ 'ಸಂಗೀತ ವಿದ್ಯಾಧರಿ' ಎಂದು ಕರೆಯುತ್ತಿದ್ದರು. ಗಂಗ ಪೆರ್ಮಾಡಿಯ ಪತ್ನಿ 'ಬಾಚಲದೇವಿ' ಸಂಗೀತ ವಿದ್ಯೆಯಲ್ಲಿ ಅಸಮಾನಳು ಎಂದು ವರ್ಣಿತವಾಗಿದೆ. ಸಾಮಂತ ನಾದ ಎರೆಯಪ್ಪ(ಮ್ಮ)ನು “ವಾದ್ಯವಿದ್ಯಾಧರನೂ' 'ಸಕಳ ಕಳಾಧರನೂ' ಆಗಿದ್ದನು, ವಿಷ್ಣುವರ್ಧನನು 'ಸಂಗೀತಪ್ರಸಂಗಭಂಗೀ ಸಂಗತ ಚತುರಭರತ' ನಾಗಿದ್ದನು. ಈ ಹೆಸರುಗಳನ್ನು ನೋಡಿದರೆ ಶಿವಶರಣರ ಪೂರ್ವದಲ್ಲಿಯೂ ಸಂಗೀತವು ಪರಂಪರಿತ ವಾಗಿ ಈ ನಾಡಿನಲ್ಲಿ ಬೆಳೆದು ಬಂದಿದೆಯೆಂಬುದು ಗೋಚರಿಸುತ್ತದೆ.



(೨)
ಕನ್ನಡ ಸಾಹಿತ್ಯಕ್ಕೆ ಸಂಗೀತದ ಮೆರಗು ಕೊಟ್ಟು ಜನತೆಯ ಮನೆಮನೆಗೂ ವಚನಗಳನ್ನು ಮುಟ್ಟಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ವಚನಗಳನ್ನು ಹಾಡುವ ಪರಂಪರೆಯೇ ಏರ್ಪಟ್ಟು, ಅವುಗಳಿಗೆ ರಾಗ, ತಾಳಗಳನ್ನೂ ಸೂಚಿಸುತ್ತಿದ್ದುದಕ್ಕೆ ಉದಾಹರಣೆಗಳು ಹರಿಹರ, ರಾಘವಾಂಕ, ಭೀಮಕವಿ ಇವರಲ್ಲಿ ದೊರೆಯುತ್ತವೆ. ಬಸವಣ್ಣನವರು ವಚನಗಳನ್ನು ಹಾಡಿದರು. 'ತಾಳ, ಮಾನ, ಓಜೆ, ಬಜಾವಣೆಗಳ ಲೆಕ್ಕ ಭಕ್ತಿಯ ಹಾಡಿಗೇಕೆ' ಎಂದು ಒಂದು ವಚನದಲ್ಲಿ ಹೇಳಿದ್ದಾರೆ. ಇನ್ನೊಂದು ವಚನದಲ್ಲಿ 'ದಂಡಿಗೆ' 'ಸೋರೆ' 'ತಂತಿ' 'ಕಡ್ಡಿ' 'ಬತ್ತೀಸರಾಗ' ಮೊದಲಾದವುಗಳನ್ನು ಉಲ್ಲೇಖಿಸಿದ್ದಾರೆ. 'ಕೂಡಲಸಂಗನ ಶರಣರ ಕಂಡು, ಆಡಿ ಹಾಡಿ ಬದುಕು' ಎಲೆ ಮನವೇ ಎಂದಿದ್ದಾರೆ. ಆಡದೆ ನವಿಲು? ಹಾಡದೆ ತಂತಿ?' ಎಂದು ಮತ್ತೊಂದು ವಚನದಲ್ಲಿ ನುಡಿದಿದ್ದಾರೆ. ಭಕ್ತಿಯಿಲ್ಲದೆ ಹಾಡಿದ ಹಾಡು, ತಂತಿಯ ಮಿಡಿತ, ನವಿಲಿನ ಕುಣಿತ, ಇಕ್ಕುಳದ ಕೈಮುಗಿತಕ್ಕೆ ಸಮಾನವೆಂದಿದ್ದಾರೆ. ಅವರು ಹಾಡಿದುದು ಕೇಡಿಲ್ಲದ ಪದವಿಯವ ಭಕ್ತಿಯ ಹಾಡು, ಅಲ್ಲಮಪ್ರಭುದೇವನ 'ಎರಡೆಂಬತ್ತು ಕೋಟಿ ವಚನವ ಹಾಡಿ'ದನೆಂದು ತಿಳಿಸಿದ್ದಾನೆ. ಅಲ್ಲದೆ ಅಲ್ಲಮನು ಅನೇಕ ಹಾಡುಗಳನ್ನು ಬರೆದು ಅವುಗಳಿಗೆ ಹಾಡಲು ಅನುಕೂಲವಾಗುವಂತೆ ರಾಮಶ್ರೀ, ಮಾಳವಗೌಳ, ಮಧುಮಾಧವಿ, ದೇಶಾಕ್ಷಿ, ಗೌಳ, ಧನ್ಯಾಸಿ, ಭೌಳಿ, ನಾಟಿ-ಮೊದಲಾದ ರಾಗಗಳ ಹೆಸರುಗಳನ್ನು ಸೂಚಿಸಿದ್ದಾನೆ. ಅಲ್ಲದೆ ಹರೀಶ್ವರ ಕವಿಯು ಪ್ರಭುದೇವರ ರಗಳೆಯಲ್ಲಿ ಅವನನ್ನು ವರ್ಣಿಸುವಾಗ :
'ಇ೦ತು ಬಳೆಯ ಬಳಿದುದಾತನೊಡನ ವಿದ್ಯೆ;
ಸಂತತಂ ಸೊಗಯಿಪ ಮೃದಂಗದ ಮಹಾವಿದ್ಯೆ;
ಆ ವಿದ್ಯೆಯೊಡನೆ ಯೌವನಮೊಸೆದು ಬಳೆಯುತಿರೆ;
ಎಂದು ಅಲ್ಲಮನೊಡನೆಯೆ 'ಮೃದಂಗ ಬಾರಿಸುವ ಕಲೆಯೂ ಬೆಳೆಯಿತೆಂದು ಕವಿ ಹರಿಹರದೇವನು ವರ್ಣಿಸಿದ್ದಾನೆ, ಗೊಗ್ಗೆಶ್ವರಾಲಯಕ್ಕೆ ಬಂದು 'ಮೃದಂಗಮುಂ ಇಕ್ಕೆಲದೊಳುಂ ನಿರಿಸಿ, ಸಿಂಗರಿಸಿ, ರಂಗಂಬೊಕ್ಕು ಮೇಳೈಸಿ, ಅತಿರಸಾಮೃತ ಕಾಂತಿಯುತ, ನುತಗತಿ, ನವೀನಗತಿ, ರಸಗತಿ, ನುಣ್ಣತಿ, ಗಂಭೀರಗತಿ, ಸಾಂದ್ರಗತಿ, ಜಾಣತಿ, ಮಧುರಗತಿ, ಮನೋಹರಗತಿ, ಸಂಗತಿಗಳನ್ನು ಶಂಕರನಿಗೆ ಕರ್ಣಾಭರಣವಾಗುವಂತೆ ಬಾರಿಸಲು ಕುಳಿತು ಕೇಳಿದ ಜನ, ನಂದಿ ಮಾಕಾಳರು ತಲೆದೂಗುತ್ತಾರೆ! ಮುರಜದ ಗತಿಗೆ ಮಾರುಹೋದವರಲ್ಲಿ ಕಾಮಲತೆಯೂ ಒಬ್ಬಳು ಎಂದಿದ್ದಾನೆ ಹರಿಹರ ಕವಿ. ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಅಲ್ಲಮನು ಮದ್ದಳೆ ಬಾರಿಸುತ್ತಿದ್ದರೆ ಮಾಯಾದೇವಿ 'ಕಾರಮುಗಿಲಿನ ಗರ್ಜನೆಯ ಕೇಳಿ, ನಲಿದು, ನಟಿಸುವ ಸೋಗೆ ನವಿಲಂತೆ ನಟಿಸುತ್ತಾಳೆ' ಎಂದು ವರ್ಣಿಸಲಾಗಿದೆ. ಈ ಎರಡೂ ಕಾವ್ಯಗಳಲ್ಲಿ ಅಲ್ಲಮಪ್ರಭುವನ್ನು ಮದ್ದಳೆಯಲ್ಲಿ ನುರಿತ ಕಲಾವಿದನೆಂದು ವರ್ಣಿಸಲಾಗಿದೆ. ಬಸವಣ್ಣನಂತೆ ಅಲ್ಲಮನ ಶ್ರೇಷ್ಠ ಸಂಗೀತಗಾರನಿದ್ದುದು ಸುಸ್ಪಷ್ಟ ಪ್ರಸಿದ್ಧಯೋಗಿ ಸಿದ್ಧರಾಮನು ತನ್ನೊಂದು ವಚನದಲ್ಲಿ, “ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತನ್ನ ಮನ ನೋಡಯ್ಯ''ಎಂದು ನುಡಿದಿದ್ದಾನೆ, ಗಜೇಶಮಸಣಯ್ಯನೆಂಬ ವಚನಕಾರನು, 'ದೇಶಾಕ್ಷಿಯಿಲ್ಲದ ರಾಗ ಉಪ್ಪಿಲ್ಲದೂಟ ಸಪ್ಪ ಕಾಣಿರಣ್ಣಾ' ಎಂದಿದ್ದಾನೆ. ಇದು ಅವನಿಗೆ ದೇಶಾಕ್ಷಿರಾಗದ ಮೇಲಿದ್ದ ಮಮತೆಯನ್ನು ತೋರಿಸುತ್ತದೆ. ಹೀಗೆ ವಚನಕಾರರಲ್ಲನೇಕರು ಸಂಗೀತವಿದ್ಯೆಯ ಮೇಲಿದ್ದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದುದು ಮಾತ್ರವಲ್ಲ, ಅವರು ಸ್ವತಃ ಸಂಗೀತಗಾರರಿದ್ದು ಅದನ್ನು ಪ್ರದರ್ಶಿಸುತ್ತಿದ್ದರೆಂದೆನಿಸುತ್ತದೆ. ಢಕ್ಕೆಯ ಮಾರಯ್ಯ, ಕಿನ್ನರಿಯ ಬ್ರಹ್ಮಯ್ಯ, ಸಕಳೇಶ ಮಾದರಸರು ಸಂಗೀತದಲ್ಲಿ ಬಲ್ಲಿದರಾಗಿದ್ದರು. ಕಿನ್ನರಿಯ ಬ್ರಹ್ಮಯ್ಯನು ಕಿನ್ನರಿ ನುಡಿಸುವಲ್ಲಿ, ಸಕಳೇಶ ಮಾದರಸನು ವೀಣೆ ನುಡಿಸುವಲ್ಲಿ ಖ್ಯಾತರಾಗಿದ್ದರು, ಭೀಮಕವಿಯ ಬಸವಪುರಾಣದಲ್ಲಿ ಮಾದರಸರ ವೀಣಾವಾದನದ ವಿಷಯದಲ್ಲಿ ಹೀಗೆ ಬರೆಯಲಾಗಿದೆ.

'ನಾದ ವಿದ್ಯಾಪಂಡಿತಂ , ಸಕಳ ವೀಣಾದಿ ಕಲಾವಿದಂ, ಭರತಾದಿ ಶಾಸ್ತ್ರ ವಿಚಕ್ಷಣಂ,' 'ಬತ್ತಿಸಾದಿ ರಾಗಗಳಿಂ ದಂಡಿಗೆಗಳಂ ರಚಿಸಿ, ಪ್ರೀಯವಾದ ವೀಣೆ ಮೊರೆಯಲು ಪ್ರಸ್ತುತವನರಿದು, ಕೋಣಿಯೊಳು ಹೆಸರುಳ್ಳ ರಾವಳ ವೀಣೆ, ವಾರಣಹಸ್ತ, ಗೌರೀವೀಣೆ, ಕಿನ್ನರವೀಣೆ, ಕಚ್ಛಪವೀಣೆ, ಕೈಲಾಸವೀಣೆ, ತುಂಬುರವೀಣೆ, ಪದ್ಮಜವೀಣೆ, ಸ್ವಾಯಂಭುವೀಣೆ, ಸಾರಂಗವೀಣೆ, ಪಿನಾಕವೀಣೆ ಇವು ಮೊದಲಾದವುಗಳಿಂದ, ಮೇಘಚಾಳ, ಯೌಠಾಣಮಾನಿತ, ನವಠಾಣ, ಸಂಧಾನ, ಅಮರ, ತಾಳೆ ಪಾಠಮೊದಲಾದವುಗಳನ್ನು ನಾದಮೂರ್ತಿ ಶಿವನೇ ಕೇಳೆಂದು ನುಡಿಸುತ್ತಿದ್ದನು. ಸಪ್ತ ಸ್ವರಗಳಲ್ಲಿ, ಇಪ್ಪತ್ತೆರಡು ಶ್ರುತಿಗಳಲ್ಲಿ ನಾರಾಟ, ಕಾವುಳವೆಂಬ ಧ್ವನಿಗೂಡಿ, ಚೌಕುಳವೆಂಬ ಸುಗತಿಯಿಂದ ಅನುಬದ್ದಗೂಡಿ, ಗಮಕ ಸಪ್ತಕದಲ್ಲಿ, ಮಂದ್ರ ಮಧ್ಯಮ ಮತ್ತು ತಾರಸ್ವರದಲ್ಲಿ, ಶುದ್ಧ ಸಾಳಗದ ದೇಶಿ ಮಾರ್ಗದಲ್ಲಿ ನುಡಿಸುತ್ತಿದ್ದನು. ಅಲ್ಲದೆ ಪ್ರಸಿದ್ಧವಾದ ಮಲಹರಿ, ಲಲಿತ, ಧನ್ಯಾಸಿ, ಮಂಗಳಶಿ, ದೇಶಾಕ್ಷಿ, ಕುರಜೆ, ಗುಜ್ಜರಿ, ದೇಶಿ, ವೇಳಾಪರಿ ಮೊದಲಾದ ರಾಗಗಳಲ್ಲದೆ ಪರುಷರಾಗಳನ್ನು ಗೀತ ರೂಪದಲ್ಲಿ ವಾದ್ಯದಲ್ಲಿ ನುಡಿಸುತ್ತಿದ್ದನು. ಇವೆಲ್ಲ ಭಕ್ತಿಯಿಂದ ಶಿವನನ್ನು ಹಾಡುವ ಹಾಡುಗಳು, ಕಿನ್ನರಿ ಬ್ರಹ್ಮಯ್ಯನು ಕಿನ್ನರಿ ವೀಣೆ ನುಡಿಸುತ್ತಿದ್ದು ಶಿವನು 'ಸುನಾದರಸಲೋಲ' ನಾಗಿ ಒಂದು 'ಹೊನ್ನು' ಒಂದು 'ಹಣ' ಒಂದು 'ಹಾಗ' ಕರುಣಿಸುತ್ತಿದ್ದನಂತೆ, ಸಂಗೀತವು ಶರಣರಿಗೆ ಶಿವನನ್ನೊಲಿಸುವ ಸಾಧನವಾಗಿದ್ದಿತು. 'ರಾಗದ ಸಂಕಣ್ಣ ನೆಂಬುವನು ಸಂಗೀತದಿಂದಲೇ ಪ್ರಸಿದ್ದನಾಗಿದ್ದನು. ಅವನ ಹೆಸರೇ ಅದನ್ನು ಸೂಚಿಸುತ್ತದೆ, ಕಲ್ಯಾಣದ ಚಾಳುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ವಿದ್ವಾಂಸನೀತ, ಆಸ್ಥಾನದಲ್ಲಿ ನಿತ್ಯವು ಹಾಡಿ ಎರಡು ವರಹಗಳನ್ನು ಪಡೆಯುತ್ತಿದ್ದನಂತೆ ಸಂಕಣ್ಣನ ಸಂಗೀತವು ಭಕ್ತಿಯ ಕಂಪುಗೂಡಿರುತ್ತಿತ್ತು. ಈತನ ಗೌಳದೇಶದ ಗಾಯಕನೊಡನೆ ಗೆದ್ದುದರಿಂದ ದೊರೆಯು ಈತನಿಗೆ 'ರಾಗರಸಾಂಕ' ಎಂಬ ಬಿರುದು ಕೊಟ್ಟಿದ್ದಾನೆ. ಅನೇಕ ಶಿವ ಶರಣರ ವಚನಗಳಿಗೆ ರಾಗ ನಿರ್ದೇಶನಗಳು ದೊರೆಯುತ್ತವೆ. 'ಅಲ್ಲಮನ ವಚನ ಚಂದ್ರಿಕೆ,' 'ಶಿವದಾಸ ಗೀತಾಂಜಲಿ' ಗಳಲ್ಲಿ ಇದಕ್ಕೆ ಹೇರಳ ಉದಾಹರಣೆಗಳನ್ನು ಕಾಣುತ್ತೇವೆ.



(೪) 
ಮಹಾಕವಿ ಹರಿಹರನು ಸಂಗೀತ ಕಲೆಯನ್ನು ಚೆನ್ನಾಗಿ ಅರಿತಿದ್ದನೆಂಬುದನ್ನು ಆತನ ಕಾವ್ಯಗಳ ಅಧ್ಯಯನದಿಂದ ಗೀತಗಳನ್ನು ಹಾಡುತ್ತಿದ್ದುದನ್ನು ಪ್ರಸ್ತಾಪಿಸುತ್ತಾನೆ. ಕವಿ ಹರಿಹರದೇವನು ರಗಳೆಗಳಲ್ಲಿ ಶರಣರ ಕಥೆಗಳನ್ನೇ ಹಾಡುತ್ತಿದ್ದನೆಂದು ಹೇಳಿದ್ದಾನೆ. "ಲಲಿತ ಬಂಗಾಳದಿಂದೊಲಿದು, ಮಲಹರಿ, ವರಾಳಿಯಿಂದೊಲಿದು, ದೇಶಿಗುಜ್ಜರಿಗಳಿಂದ, ದೇಶಾಕ್ಷಿ, ಗೌಳಗಳಿಂದ"- ಹೀಗೆ 'ಬತ್ತೀಸ ರಾಗ' ದಿಂದ ಈಶ್ವರನನ್ನು ಹಾಡುತ್ತಾನೆಂದು ಹೇಳಿದ್ದಾನೆ. ರಗಳೆಯ ಮುಖ್ಯ ಲಕ್ಷಣಗಳಲ್ಲೊಂದು 'ತಾಳ', ಸಂಗೀತಕ್ಕೂ ಇದು ಮುಖ್ಯವಾಗಿದೆ. ಹರೀಶ್ವರ ಕವಿಯು ಹಲವಾರು ಕೃತಿಗಳಲ್ಲಿ ತನಗಿದ್ದ ಸಂಗೀತದ ಅಭಿರುಚಿಯನ್ನು ವ್ಯಕ್ತಪಡಿಸಿದ್ದಾನೆ. ಆನಯನಾರರ ರಗಳೆಯಲ್ಲಿ, ಆ ಶರಣನು ದನಗಾಹಿಯಾಗಿದ್ದರೂ ಅವನು ಮಹಾಭಕ್ತನಾಗಿದ್ದನು. ದನಗಳನ್ನು ಒಟ್ಟುಗೂಡಿಸಿಕೊಂಡು, ಶಿವನ ಕಿವಿಗೆ ಸವಿದನಿಯನೀವಂತೆ, ರಾಗರಸದೊಳಗೆ ಪಂಚಾಕ್ಷರಿಗಳನ್ನು ತನ್ನ ಕೊಳಲಿನಿಂದ ನುಡಿಸುತ್ತಿದ್ದನು, ಆ ನಾದಕ್ಕೆ ಮರಳಾದ ಗೋವುಗಳೆಲ್ಲ 'ಮುಗಿದಕಣ್‌, ಎತ್ತಿದಮುಖ, ಇಳಿದಕಟವಾದ ಹೊಸನೊರೆಗರುಂಕೆಗಳಿಂದ ಆಲಿಸುತ್ತಿದ್ದುವು. ಹುಲಿ-ಹುಲ್ಲೆ, ಹಾವು-ಮುಂಗಲಿಗಳು ವೈರವನ್ನು ಮರೆತು ಕಿವಿಗೊಡುತ್ತಿದ್ದವು; ಗಿಳಿ, ಅಂಚೆ,ಕೋಗಿಲೆ ಕೇಳಿ ನಲಿಯುತ್ತಿದ್ದುವು; ತರುಗಿರಿಗಳೂ ಎಳಸಿ ಕೇಳುತ್ತಿದ್ದುವು. ಈ ರೀತಿ ನಿಸರ್ಗವನ್ನೇ ತೃಪ್ತಿಪಡಿಸಿದ ಮೇಲೆ ಈಶ್ವರನ ಮನ ಆತನ ಕೊಳಲ ಧ್ವನಿಯೊಳಗೆ ಮುಳುಗದಿದ್ದೀತೆ? ಆ ಧ್ವನಿ ನಾಯನಾರನ ಹೃದಯದ ಉಸಿರು. ಗೋವು ಕಾಯುತ್ತಲೆ ಭಕ್ತಿಭಾವ ವನ್ನು ಬೆಳೆಯಿಸಿಕೊಂಡ ಆತನ ಕೊಳಲದನಿಯ ಸುಶ್ರಾವ್ಯತೆಯನ್ನು ಆತನ ಭಕ್ತಿಯ ಇಂಪನ್ನು ಲೋಕಕ್ಕೆ ಪ್ರಕಟಪಡಿಸಬೇಕೆಂಬ ಹಂಬಲವುಳ್ಳ ಶಿವನು, ಒಂದುದಿನ ಒಂದು ಶಿಕ್ಷೆಯ ಮರದಮೇಲೇರಿ ಕುಳಿತುಕೊಂಡಿರುತ್ತಾನೆ. ಶರಣನು ಭವಮೂರ್ತಿಯನ್ನಪ್ಪಿ ತನ್ನ ಹೃತ್ಯ ಮಲದೊಳೆರಿಸಿಕೊಂಡು ಮರದ ಮುಂದೆ ಅಡ್ಡಂ ತಿಗಟಂ ಪರಿದಾಡಿ, ಕೊಳಲಿಂದ ಪಂಚಾಕ್ಷರಿಯನೂದಿ ಹೆಚ್ಚಿ ಹಿಗ್ಗಿ, ಸವಿದು, ಹೊರಗಿನ ದನಿಯನಾಲಿಸದಂತೆ ಆಡುತ್ತ, ಶಿವನನ್ನು ಧ್ಯಾನಿಸುತ್ತ' ತಲ್ಲೀನನಾಗಿರುತ್ತಾನೆ. ಇನ್ನೊಂದು ಕೊಳಲು ವಾದನದ ಉತ್ತಮ ದೃಶ್ಯನಿರ್ಮಾಣ ಹರಿಹರನಲ್ಲಿ: ತಿರುನೀಲಕಂಠವಾಣರೂ 'ಗಾನವಿದ್ಯಾವಿಶಾರದರು: ಶಿವದೇವಾಲಯ ಗಳಲ್ಲಿ ಅತ್ಯಂತ ಭಕ್ತಿಯಿಂದ ಭಕ್ತಿಯ ಹಾಡುಗಳನ್ನು ಹಾಡುತ್ತಿದ್ದ ಶಿವಶರಣರು. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದ ಇನ್ನೊಂದು ದೃಶ್ಯವನ್ನು ಕವಿ ಹೀಗೆ ವರ್ಣಿಸಿದ್ದಾನೆ: ಕಣ್ಮುಚ್ಚಿ ಸಪ್ತಸ್ವರ, ತ್ರಿಸ್ಟರದಿಂದ, ಮಲಹರಿ, ಪಳಮಂಜರಿ, ಲಲಿತ, ವರಾಳಿ, ಕನ್ನಡ, ಗೌಳ, ದೇಶಿ, ನಾಟಿ, ಬಹುಳಿ, ಶಾಂತಮಲಹರಿ, ರಾಮಕ್ರಿಯಾ, ಶುದ್ದ ಸಾಳಗ ರಾಗಗಳನ್ನು ತಾರ ಮಧುರ ಮಂದ್ರವನಿಪ ತ್ರಿಪಾದಗಳಿಂದ ಸೊಗಸಾಗಿ ಭಕ್ತಿರಸದಲ್ಲಿ ಹಾಡಿದ ಹಲವು ಚಿತ್ರಗಳನ್ನು ನಿರ್ಮಿಸುತ್ತಾನೆ. ಸಂಗೀತವು ಸ್ವತಂತ್ರವಾಗಿ ಹೊರಹೊಮ್ಮಿದಂತೆ ನೃತ್ಯದ ಜೊತೆಗೂ ಹೊರಹೊಮ್ಮುತ್ತದೆ. ಸಂಗೀತವಿಲ್ಲದೆ ನೃತ್ಯವು ಹೊರಹೊಮ್ಮುವಂತಿಲ್ಲ, ಶೃಂಗೀಶ್ವರನ ನಾಟ್ಯನ್ನು ವಿವರಿಸುವಲ್ಲಿ ಆವುಜಗಳ ಧ್ವನಿ ಸುಧೆಯನ್ನು ಸೂಸುತ್ತಿತ್ತು; ಕಹಳೆಯ ಧ್ವನಿ ಸುಗತಿಯನ್ನು ಹೊರಹೊಮ್ಮಿಸುತ್ತಿತ್ತು; ಕರಡೆಯಧ್ವನಿ ಸೊಂಪನ್ನು, ಕೌಸಾಳವು ಸಂಜ್ಞೆಯನ್ನು, ತಾಳಗಳು ನರ್ತನವನ್ನು ಹೊರಸೂಸುತ್ತಿದ್ದುವು ಎಂದು ವರ್ಣಿಸಿದ್ದಾನೆ. ಮಲುಹಣನ ರಗಳೆಯಲ್ಲಿ ಮಲುಹಣಿಯ ನೃತ್ಯವನ್ನು ಹೀಗೆ ವರ್ಣಿಸುತ್ತಾನೆ:

"ಮುಂದಣ ರಂಗಭೋಗ ಮಂಟಪದೊಳಿತ್ತರಂಗೊಂಡೋಲಗವಿತ್ತು, ಕುಳ್ಳಿರ್ದ, ಪರಮಭಕ್ತರ, ಸಚಿವರ, ರಾಜಪುತ್ರರ, 
ವಡ್ಡ ವ್ಯವಹಾರಿಗಳ, ಕಳಾವಿದರ, ಸತ್ಯರ, ಸಾಹಿತ್ಯರ, ವಿಳಾಸಿನಿಯರ, ಪುರಜನರ, ಪರಿಜನರ,
ನಡುವಣ ರಂಗಮಧ್ಯದೊಳ್ - ನರ್ತನಂಗೊಡುವ, ತಾಳದ ಗತಿಗೊಡುವ, ಮದ್ದಳೆಯ ಲಹಣಿಗೊಡುವ, ಆವುಜದ
ದೆಖ್ಖಾಳಂಗೊಡುವ, ಕೌಸಾಳದ ಹಲ್ಲಣ್ಣಿಗೊಡುವ, ವಾಸದ ಲಕ್ಷ್ಮಿಗೊಡುವ ಚೀಹಣಿಯರ ಸಂಗೀತದ ಸಂದಣಿಯೊಳ್ ...... "

ಎಂದು



"ಕುಂಬಾರ ಗುಂಡಯ್ಯನ ರಗಳೆಯಲ್ಲಿ ಮತ್ತೆ ಹರಿಹರ ಕವಿ ಸಂಗೀತ ನಾಟ್ಯಗಳ ಪರಿಜ್ಞಾನವನ್ನು ಪ್ರಕಟಿಸುತ್ತಾನೆ. ಘಟಗಳನ್ನು ಮಾಡುತ್ತ, ಹಾಡುತ್ತ ಕುಣಿಯುತ್ತಾನೆ: ಭಕ್ತಿಭಾವದಿಂದ ಘಟಗಳನ್ನು ಬಾರಿಸುತ್ತಾನೆ. 'ಕುಣಿದಾಡುತ ಮಡಕೆಗಳಂ ಬಾರಿಸಿ, ಮಣಿದು, ತೂಗಾಡುತ್ತಾನೆ' ಇವನ ಕುಣಿತಕ್ಕೆ ಶಿವನ ಮೆಚ್ಚಿ ಕುಣಿಯುತ್ತಾನೆ. ಆತನು ಘಟಗಳನ್ನು ಬಾರಿಸುವ ದನಿಗೆ ಶಿವನ ಪಾದಗಳ ಅಂದುಗೆ ಘಲಕ್ ಎಂದೂ, ಕಟಕಧ್ವನಿ ಝಣಕ್ ಎಂದೂ ನಾದ ಮಾಡುತ್ತವೆ.

ಸಂಗೀತ, ಗಮಕ, ನಾಟ್ಯ ಪ್ರೇಮಿಯಾಗಿದ್ದ ಕವಿ ರಾಘವಾಂಕನು 'ಗಾನವಿನೋದಿ ಇರ್ದೊಡೇಂ ಜಾಣರಿಲ್ಲದೊಡೆ, ಕಳಾನ್ವಿತರ ನಿವಹವಿದ್ದೇನು ಕಲಾಪ್ರೌಢರಿಲ್ಲದೊಡೆ' ಎಂದು ಕೇಳಿರುವಲ್ಲಿ ಮತ್ತು ಹರಿಶ್ಚಂದ್ರ ಕಾವ್ಯದಲ್ಲಿ ಸಂಗೀತ ನರ್ತನ ವಿದ್ಯಾ ಪ್ರದರ್ಶನಕ್ಕೆಂದೇ ಒಂದು ಸನ್ನಿವೇಶ ರಚಿಸಿಕೊಂಡಿದ್ದಾನೆ. ಹೊಲತಿಯರು ಹರಿಶ್ಚಂದ್ರನೆದುರು ಹಾಡಿ, ಕುಣಿದು ಆತ ನನ್ನೊಲಿಸಿದ ಸನ್ನಿವೇಶವೇ ಇದು. ಅಲ್ಲಿ ಕವಿ ರಾಘವಾಂಕನು ಅವರು ಹಾಡಿ ನರ್ತಿಸಿದ ಪ್ರಸಂಗವನ್ನು ವರ್ಣಿಸಿದ ನುಡಿಗಳಿವು:

“ಗತಿ, ಗಮಕ, ಗಹಗಹಿಕೆ, ತಿರುವ, ಚಾಳೆಯ, ಕೊಂಕು, ಜತಿ, ಜೋಕೆ, ಮಾರ್ಗವಣೆ, ವಹಣಿ, ತರಹರಿಕೆ, ಕಂಪಿತಹೋಪ
ಬಾಗು, ಡೊಕ್ಕರ ವಿವರ, ಕಾಳಾಸ, ಕಮ್ಮವಣೆ, ಲೋಲಂಗಿತ, ಮತಶುದ್ಧ ಸಾಳಂಗ, ಸಂಕೀರ್ಣಮಂ ಯಥೋಚಿತ ತಾರ,
ಮಧುರ, ಮಂದ್ರಂಗಳಿಂ ಹಾಡಿ, ಭೂಪತಿಯ ದುಗುಡವನ್ನು ತೊಳೆದರು, ರಾಗರಸಲಹರಿಯಿಂದ ಅನಾಮಿಕ ಸತಿಯರು" ಅವರು 'ದಂಡಿಗೆವಿಡಿದು ಹಾಡಿದ್ದಾರೆ. ಭೀಮಕವಿಯು ಬಸವ ಪುರಾಣದಲ್ಲಿ ಶಿವನ ಆಸ್ಥಾನದಲ್ಲಿ ನಡೆದ ಸಂಗೀತನ್ನು ವರ್ಣಿಸುವ ಮಾತುಗಳಿವು: “ತತ ವಿತರ ಘನ ಶುಪಿರ ವಾದ್ಯ ಪ್ರತಿ ಮಿಳಿತ ಪಕ್ಷಾದಿ ಸಪ್ತಕೃತಿಗಳ ಇಂಪು ಉಗೆ, ಮಂದ್ರ ಮಧ್ಯಮ ತಾರ ವಿಕ್ರಮದ ಅತಿಮಧುರ ಮೃದುಗೀತ ಜಾತೋನ್ನತ ರಸದೊಳೊಡಗೂಡಿ ಪಾಡುತ ಚತುರ ತುಂಬುರ ನಾರದಾದ್ಯರು ಮುಂದೆಸೆಯೊಳಿರಲು" ಎಂದು ಬಸವಣ್ಣನ ಮದುವೆಯ ಪ್ರಸಂಗದಲ್ಲಿ ಬಂದಭಕ್ತರ ಸಂತೋಷಕ್ಕೆಂದು ಭಂಡಾರಿ ಬಲದೇವನು ಭಕ್ತಾಸ್ತ್ರಾನಂಗಳನಲ್ಲಿ ಕೀರ್ತನ ನಾಟಕ, ಸಂಗೀತ ಮೊದಲಾದವುಗಳ ಮೇಳಗಳನ್ನು ಏರ್ಪಡಿಸಿದ್ದನು. ಆಗ “ರೀತಿಯಲಿ, ಆನಂದಗೀತ ಸಮೇತ ಶಂಕರಗಿ ತತಿಯೊಳು ಖ್ಯಾತರುದ್ರನ ಮಹಿಮೆಯನಂಕಿಸಿ ಪಾಡುವರು ಕೆಲರು" ಎಂದು ಭೀಮಕವಿಯು ವರ್ಣಿಸಿದ್ದಾನೆ. ಇದಲ್ಲದೆ ಇನ್ನೂ ಅನೇಕ ಪ್ರಸಂಗಗಳಲ್ಲಿ ಭೀಮಕವಿಯು ತನ್ನ ಸಂಗೀತ ಕಲಾಭಿರುಚಿಯನ್ನು ವ್ಯಕ್ತಪಡಿಸಿದ್ದಾನೆ. ಚಾಮರಸನೂ ಈ ಮಾತಿಗೆ ಹೊರತಾಗಿಲ್ಲ, ಸಂಗೀತದ ಅಭಿರುಚಿ ವೀರಶೈವರಲ್ಲಿ ವಚನಕಾರರಿಂದಲೇ ಬಳುವಳಿಯಾಗಿ ಬಂದ ಆಸ್ತಿ ಎನ್ನಬಹುದು, ಬಸವಪುರಾಣವನ್ನು ಹಾಡುವುದಕ್ಕೆ ಹಾಕಿದ ರಾಗ-ತಾಳಗಳನ್ನು ನೋಡಿದರೆ 'ಗಮಕ'ದ ಪರಂಪರೆಯು ಹೇಗೆ ಬೆಳೆದಿತ್ತೆಂದು ಗೋಚರಿಸುತ್ತದೆ.



ಸಂಗೀತ ಶಾಸ್ತ್ರವನ್ನು ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ವಿವೇಚಿಸುವಾಗ ಗಮನಕ್ಕೆ ಬರುವ ಇನ್ನೊಂದ ಪ್ರಮುಖ ಹೆಸರೆಂದರೆ ಶ್ರೀ ನಿಜಗುಣಶಿವಯೋಗಿಗಳದು ಅವರು ಪ್ರಸಿದ್ಧ ಕವಿಗಳೂ ದಾರ್ಶನಿಕರೂ ಆಗಿದ್ದು ಕನ್ನಡದಲ್ಲಿ ಹಲವು ಕೃತಿ ರಚಿಸಿದ್ದಾರೆ. ಅವರು ರಚಿಸಿದ 'ವಿವೇಕ ಚಿಂತಾಮಣಿ' ಕನ್ನಡದ ಪ್ರಥಮ ವಿಶ್ವಕೋಶ, ಅವರು ಆಕೃತಿಯ ನಾಲ್ಕನೆಯ ಅಧ್ಯಾಯದಲ್ಲಿ ಸಂಗೀತ ಶಾಸ್ತ್ರದ ಸಂಪೂರ್ಣ ವಿವರಗಳನ್ನೇ ಕೊಟ್ಟಿದ್ದಾರೆ. ಗಮಕಿಯ ಲಕ್ಷಣವನ್ನು ಹೇಳುವಾಗ 'ತಾನ ಮಾನಂದೋರಿ, ವಿಶ್ರಮಣವರಿದು, ಪದನಂ ವ್ಯಕ್ತಿಗೆಯು, ಕೇಳ್ವರ ಕಿವಿಗೊಳಿಸಿ, ಮೃದು ಮಧುರ ವರ್ಣೋಚ್ಚಾರ ಮಾಳ್ವ ಗಮಕಿಗಳಿಂ ಎಂದು ವಿವರಿಸಿದ್ದಾನೆ. ಓಂಕಾರ, ಅದರಿ೦ದುವಿಸುವ ದಶವಿಧಧ್ವನಿ, ಮಧುರ ಮದ್ರ ತಾರ ಸ್ವರಭೇದ, ಷಡ್ಜಾದಿ ಸ್ವರಗಳುತ್ಪತ್ತಿ, ಸ್ವರೋತ್ಪತ್ತಿ, ತಾಲ, ಷಡ್ಜಾದಿ ಸ್ವರ ಧ್ವನಿಭೇದ, ಸ್ವರ ಜನ್ಮನಕ್ಷತ್ರ, ಸ್ವರಗಳಿಂದ ಹುಟ್ಟುವ ಧ್ವನಿ, ಇಪ್ಪತ್ತೆರಡು ಶೃತಿಗಮಕ, ಏಳು ದೇಶೀ ಗಮಕ, ಗೀತ, ಗೀತ ಲಕ್ಷ್ಮಣ, ರಾಗೋತ್ಪತ್ತಿಗೆ ಗ್ರಾಮತ್ರಯ ಇವುಗಳಿಂದ ರಾಗ ಜನನ
ಮೂವತ್ತಾರು ರಾಗ, ರಾಗಾಂಗ, ಭಾಷಾಂಗ, ಕ್ರಿಯಾಂಗ ಮತ್ತು ಉಪಾಂಗಗಳೆಂಬ ನಾಲ್ಕು ಅಂಗಗಳಿಂದ ಹುಟ್ಟುವ ಒಂದು ನೂರಾ ಐವತ್ತೇಳು ರಾಗಗಳು, ಪ್ರಸಿದ್ಧ ಮೂವತ್ತೆರಡು ರಾಗಗಳು, ಮಿತ್ರರಾಗ, ಗಾನವೈಖರಿ, ವಾದ್ಯಭೇದ ಇಪ್ಪತ್ತೆರಡು ತೆರನಾದ ತಂತಿವಾದ್ಯ, ಗಾಯಕಿಯರು, ಮದ್ದಳೆ, ಆವುಜಕಾರರು, ತಾಳ, ಧ್ರುವ, ಮಾತ್ರೆ, ಪ್ರಸ್ತಾರ, ತಾಳಭೇದ - ಇತ್ಯಾದಿಗಳನ್ನೂ ವಿವರವಾಗಿ ಕೊಟ್ಟಿದ್ದಾರೆ. ಅಲ್ಲದೆ ಅವರ ಕೈವಲ್ಯ ಪದ್ಧತಿಯ ಅನೇಕ ಹಾಡುಗಳು ಸಂಗೀತಕ್ಕಾಗಿಯೇ ರಚಿತವಾಗಿದ್ದು ಇಂದಿಗೂ ಅವುಗಳನ್ನು ವೀಣೆ ಏಕಧಾರಿಗಳ ಮೂಲಕ ಹಾಡುತ್ತಾ ಬಂದಿದ್ದಾರೆ. ಭಕ್ತರ ತಂಡಗಳು, ಭಜನಾಮೇಗಳು, ನಿಜಗುಣಶಿವಯೋಗಿಗಳ ಹಾಡು ಮಾತ್ರವಲ್ಲ, ಅನೇಕ ಸಂತಕವಿಗಳೂ ಅನುಭಾವಿಗಳೂ ಆದ ಸರ್ಪಭೂಷಣ ಶಿವಯೋಗಳು, ಘನಮಠ ಶಿವಯೋಗಿಗಳು, ಮೈಲಾರದ ಬಸವಲಿಂಗ ಶರಣರು, ನೊಣವಿನ ಕೆರೆ ಕರಿವೃಷಭೇಂದ್ರ ಸ್ವಾಮಿಗಳು, ಕೂಡಲೂರು ಬಸವಲಿಂಗ ಶರಣರು ಇವರೇ ಮೊದಲಾದವರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ಬಂದಿದ್ದಾರೆ. ಶಿವನನ್ನು
ವೀಣಾದಿಲೋಲ' ಎಂದಿದ್ದಾರೆ ನಿಜಗುಣರು, ಹೀಗಾಗಿ ಸರಸ್ವತಿಯ ಎರಡು ಕಣ್ಣುಗಳಂತಿರುವ ಸಾಹಿತ್ಯ-ಸಂಗೀತಕ್ಕೆ ವೀರಶೈವವಚನಕಾರರು, ಅನುಭಾವಿಗಳು ಕೊಟ್ಟ ಕೊಡುಗೆ ಅಪೂರ್ವವೆಂದೇ ಹೇಳಬೇಕು.


ಮೂಲ : ಸಿದ್ದಗಂಗಾಶ್ರೀ ಪತ್ರಿಕೆ 

ಶನಿವಾರ, ಸೆಪ್ಟೆಂಬರ್ 28, 2024

ಪರಿಮಳ ಬುದ್ದಿ ದೇಗುಲ ಓಡಿತ್ತ ಕಂಡೆ! - ಪ್ರಭುದೇವರು

ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ! 
ಇದೇನು ಸೋಜಿಗ ಹೇಳಾ? ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ, 
ದೇವ ಬಂದಡೆ ದೇಗುಲ ಓಡಿತ್ತ ಕಂಡೆ, ಗುಹೇಶ್ವರಾ. 
                                           --- #ಅಲ್ಲಮಪ್ರಭು ಗಳು.
--
ವಾಚ್ಯಾರ್ಥ:  ತುಂಬಿ ಎಂದರೆ ದುಂಬಿ ಎಂದು. ತುಂಬಿ ಬಂದರೆ ಪರಿಮಳ ಹೇಗೆ ಓಡುವುದು? ಮನವು ಬಂದಡೆ ಬುದ್ದಿ ಓಡುವುದು ಎಂದರೆ ಏನು? ಎಲ್ಲಿಗೆ ಓಡುವುದು? ದೇವ ಬಂದರೆ ದೇಗುಲ ಎಲ್ಲಿಗೆ ಯಾಕೆ ಹೇಗೆ ಓಡುವುದು? ಮೇಲ್ನೋಟಕ್ಕೆ ಏನೂ ಅರ್ಥವಾಗದು.

ಈ ಬೆಡಗಿನ ವಚನವನ್ನು ಕೆಳಗಿನ ತರ ಅರ್ಥಮಾಡ್ಕೊಳ್ಳಬಹುದು.

೧. ತುಂಬಿ ಬಂದರೆ ಪರಿಪಳ ಓಡಿತ್ತು: "
ತುಂಬು, ಪರಿಪೂರ್ಣ, complete ಎಲ್ಲವೂ ಒಂದೇ ಹುರುಳಿನ ಪದಗಳು.
"ತುಂಬಿ ಬರುವುದು" ಎಂದರೆ ಪರಿಪೂರ್ಣರಾಗುವುದು. ಪರಿಮಳ ಎಂದರೆ ದೇಹವಾಸನೆ, ಭವವಾಸನೆ, ಹಳೆಯ ಜನ್ಮದ ವಾಸನೆಗಳು, ನಮ್ಮನ್ನು ಭವಕ್ಕೆ ಅಂಟಿಸಿರುವ ವಾಸನೆಗಳು. ಶಿವಗುಣಗಳು ಪರಿಪೂರ್ಣವಾಗಿ ಅಳವಟ್ಟರೆ ದೇಹವಾಸನೆ ಓಡಿಹೋಗುವುದು. 

"ಸಮತೆಯೆಂಬ ಕಂಥೆ, ಅಮಿತವೆಂಬ ಭಸ್ಮ, ಲಿಂಗವೆಂಬ ಕರ್ಪರ, ಸರ್ವಜೀವದಯಾಪಾರಿ ಎಂಬ ವಿಮಲರುದ್ರಾಕ್ಷಿ, ನಿರ್ಮೋಹವೆಂಬ ಕೌಪೀನ, ನಿಸ್ಸಂದೇಹವೆಂಬ ಮೇಖಲಾ" ಹೊದ್ದವನು "#ಪರಿಪೂರ್ಣ ನೋಡಾ ನಮ್ಮ ಜಂಗಮನು” ಎಂಬ ಸಿದ್ಧರಾಮೇಶ್ವರದೇವರ ಉಕ್ತಿಯು ಯಾರು ಪರಿಪೂರ್ಣನು / ತುಂಬಿದವನು ಎಂಬ ಪದಕ್ಕೆ ವಿವರಣೆ ನೀಡುವುದು.‌‌ 

ಜಂಗಮಮೂರ್ತಿಯು ಅಂಗಗುಣಗಳ ಭಂಗಿಸಿ "ಲಿಂಗಗುಣ ಗಳನ್ನು ಆಂಗವಿಸಿಕೊಂಡ ಕೂಡಲಸಂಗಮವಾಗಬೇಕು". ಸರ್ವಾಂಗಲಿಂಗಿಯಾಗಬೇಕು, ಸರ್ವಾಂಗ ಲಿಂಗಸಾಹಿತ್ಯ ಉಳ್ಳವರಾಗಬೇಕು. ಇಂತರವರಲ್ಲಿ ಭವವಾಸನೆ ಅಳಿದು ಶಿವವಾಸನೆ ತುಂಬಿ ತುಳುಕುವದು.

೨. ಮನ ಬಂದಡೆ ಬುದ್ದಿ ಓಡಿತ್ತು:  
"ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು" ಎನ್ನುವ ಅನುಭಾವ ಅಲ್ಲಮರದ್ದು. ನನ್ನ ನೋಟದಲ್ಲಿ ಈ ಸಾಲು ಇಡೀ #ಷಟ್‍ಸ್ಥಲ ಸಿದ್ದಾಂತದ ಸಾರಾಂಶ. #ಶಿವಯೋಗ ದ ಪರಮಗುರಿ. ಮನಬಂದಡೆ ಎನ್ನುವ ಮಾತೂ ಇದನ್ನೇ ಸೂಚಿಸುವುದು.. ಬಚ್ಚ ಬರಿಯ‌ ಬೆಳಗಿನ ಅನುಭಾವವನ್ನು! ಬುದ್ದಿ ಅನುಮಾನವನ್ನು, ದ್ವೈತಬಿದ್ದಿಯ ಕುರಿತು. ಮನ ನಿಂದಡೆ, ನಿಷ್ಠೆ ನೆಲೆಗೊಳ್ಳುವುದು.

೩. ದೇವ ಬಂದರೆ ದೇಗುಲ ಓಡಿತ್ತು: 
ದೇವಬಂದರೆ = ಆತ್ಮಸಾಕ್ಷಾತ್ಕಾರ, 
ದೇಗುಲ ಓಡಿತ್ತು = ದೇಹಭಾವನೆಯು ಹೊರಟುಹೋಯಿತು. 

ಕಾಯ ಕೈಲಾಸವಾದ ಮೇಲೆ, ದೇಹ ದೇವಾಲಯ ವಾದ ಮೇಲೆ ಮತ್ತೆಲ್ಲಿಯ ದೇಗುಲಭಾವನೆ?! ಅಂಗವೆಲ್ಲ ಲಿಂಗವಾಗಲು ಅಂದರೆ ಸಂಗಸಮರಸವಿರಲು ದೇಹದೇಗುಲವಿರದು. ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಶರಣರು #ನಿರ್ದೇಹಿ ಗಳು. ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ಎರಡಕ್ಕೆ ಹೇಳಲಿಲ್ಲಯ್ಯಾ. ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪೆನು? ಅಂಬುಧಿಗೆ ಸೀಮೆಯಲ್ಲದೆ ಹರಿವ ನದಿಗೆ ಸೀಮೆ ಯುಂಟೇ? ಭಕ್ತಂಗೆ ಸೀಮೆಯಲ್ಲದೆ ಪರಾತ್ಪರ ಜಂಗಮಕ್ಕೆ ಸೀಮೆಯುಂಟೇ? ಕೂಡಲಸಂಗಮದೇವ.

ಮಾನವ ಭಕ್ತನಾಗುವುದು, ಭಕ್ತ ಶರಣನಾಗುವುದು ಒಂದೆರಡು ಹಂತಗಳಾದರೆ, ಮೇಲಿನದ್ದು ಶರಣ ಶಿವನಾಗುವುದು! ಬಯಲಾಗುವುದು

#ಬಯಲು, #ಬೆಡಗಿನವಚನ #ಅಲ್ಲಮ #ಅರಿವಿನಗುರು‌

ಬುಧವಾರ, ಸೆಪ್ಟೆಂಬರ್ 25, 2024

ಆನು ಮುತ್ತೈದೆ, ಆನು ನಿಟ್ಟೈದೆ!

ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು:
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಯ್ಯನಂತಪ್ಪ ಎನಗೊಬ್ಬ ಗಂಡನುಂಟು!

ಬಸವಣ್ಣನವರ ಈ ವಚನದಲ್ಲಿ "ಶರಣಸತಿ-ಲಿಂಗಪತಿ" ಭಾವ ಕಾಣಬಹುದು.‌ ಶರಣಸ್ಥಲದಲ್ಲಿ ಎದ್ದು ಕಾಣುವ ಅನುಭವ ಇದು. ಮೇಲಿನ ವಚನವು ಭಕ್ತನಶರಣಸ್ತಲ ದ ವಚನ. 

ಪದಗಳ ಬಗ್ಗೆ: 
ಮುತ್ತು ಐದೆ ~ ಮುತ್ತೈದೆ  An elderly woman whose husband is alive. ಮದುವೆಯಾದ ಹೆಣ್ಣು.
ನಿಡಿದು ಐದೆ ~ ನಿಟ್ಟೈದೆ An aged woman, whose husband is alive (whose state is regarded as auspicious). - ದೀರ್ಘ ಸುಮಂಗಲೆ. 
ಗಂಡ ~ husband . ಕನ್ನಡದ ಈ ಪದ (ಗಂಡ) ಸಂಸ್ಕೃತಕ್ಕೂ ಹೋಗಿ ಕಾಂತ ನಾಗಿ ಬಳಕೆಯಲ್ಲಿದೆ.

ಮುತ್ತು, ಮುದಿ : advanced age, oldness, old age, priority; 
ಮುದುಕ / ಮುದುಕು : old man; 
ಮುದಕಿ ಮುದಿಕಿ ಮುದುಕಿ : old women
ಮುತ್ತ / ಮುದುಪ : old man; 
ಮುದು / ಮುತ್ತ್ :  mode to advance in growth, increase, become full-grown, mature, advance in years, become old; n. old age,
ಮುದುಕುತನ , ಮುಪ್ಪು :  old age;
ಮೂದೇವಿ : elder sister of Lakṣmī, goddess of misfortune. 

ನಿಡಿದು ~ ನೀಳ, ನಿಡುಪು, ಉದ್ದ, long, stretched

ಹೈದ ಹೈದೆ ಅಚ್ಚಗನ್ನಡದ ಪದಗಳು. ಇವೇ ಆಡುನುಡಿಯಲ್ಲಿ ಅಯ್ದ ಅಯ್ದೆ ಗಳಾಗಿವೆ. ಹುಡುಗ ಹುಡುಗಿ ಎಂದು ಹುರುಳು. ಅಯ್ದೆ / ಐದೆ ಎಂದರೆ a woman whose husband is alive ಎಂದು‌ ಕೂಡ.

ಮನಮುಟ್ಟದೆ ಸಂಗಯ್ಯನೊಲಿಯ

ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಾಗದನ್ನಕ್ಕ?
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ?
ನೂರನೋದಿ ಏವೆನಯ್ಯಾ,
ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆನೆಯದನ್ನಕ್ಕ?
ಶುದ್ದಿಯಿಲ್ಲದೆ ಸಂಗಯ್ಯನೊಲಿಯ‌! ಮನಮುಟ್ಟದೆ ಸಂಗಯ್ಯನೊಲಿಯ!! ಮನಮುಟ್ಟಿ ನೆನೆಯದೆ ಸಂಗಯ್ಯನೊಲಿಯ!!

ಆದರೆ‌ ಇವಾವೂ ಸಾಧ್ಯವಾಗದೆ - ಶುದ್ಧಿಗಾಗಿ- ಸುಗಂಧ ಗಳಿಂದ ಹೊರಮೈಯನ್ನು ಹೂಸಿ, -ನೆನೆಯಲು- ಎಣಿಸಲು ಜಪಮಣಿ ಕೈಗೆ ಕೊರಳಿಗೆ ಮಣಿಯ ಕಟ್ಟಿ,  -ಮನಮುಟ್ಟಲು-  ಅಷ್ಟೋತ್ತರ ಶತನಾಮಾವಳಿ (ನೂರೆಂಟು) ಹೆಸರುಗಳನ್ನು ಓದಿ, ಏನೂ ಸಾಧನೆ ದಕ್ಕದೆ ಏಗುತ್ತಿರುವೆ. Struggling to manage. ಇವೆಲ್ಲವೂ ಬಹಿರಂಗದ ತೋರಿಕೆಗಳು. 

ಸಾಧಕನ ಆತ್ಮನಿವೇದನೆ ಇಲ್ಲದೆ. 
---
ಏವೆ ಎಂಬುದನ್ನು ಕನ್ನಡದ ಒಂದು #ಆಖ್ಯಾತಪ್ರತ್ಯಯ ಎಂದು ಪಟ್ಟಿಮಾಡಲಾಗಿದೆ. ಬರುತ್ತಾನೆ, ಬರುತ್ತಾವೆ, ಬರುತ್ತಾರೆ, ಬರುತ್ತೇನೆ, ಬರುತ್ತೇವೆ, ಬರುತ್ತಾಳೆ, ಬರುತ್ತೀಯ ಗಳ ಕೊನೆಗೆ ಬರುವ ಆನೆ, ಆವೆ, ಆರೆ, ಏನೆ, #ಏವೆ, ಆಳೆ, ಈಯ ಗಳು ಕನ್ನಡದಲ್ಲಿನ ಅಂತಹ ಕೆಲ ಹಿನ್ನೊಟ್ಟು ಗಳು. 

ಸಂಸ್ಕೃತ ಮುಂತಾದ ಇಂಡೋಯುರೋಪಿಯನ್ ನುಡಿಗಳಲ್ಲಿ ಇಂತ ಪ್ರತ್ಯಯ ಗಳಿಗೆ ತನ್ನದೇ ಆದ ಅರ್ಥ ಇರಲ್ಲ. ಆದರೆ ಕನ್ನಡ  ನುಡಿಯಲ್ಲಿ ಈ ಪ್ರತ್ಯಯ ಗಳಿಗೆ ತನ್ನದೇ ಆದರ ಹುರಳು ಇರುವುದು. 
ಏವು ಏಗು ಎಗರು ಒಂದೇ ಬೇರಿನ ಅಚ್ಚಕನ್ನಡ ಪದಗಳು ಎನ್ನುವೆ.
ಎಗರು : to rise, fly, jump;  ಎಗರಿಸು : to cause to rise, cause to fly, cause to jump, shoplift; 
ಎಗರಿಕೆ :  jumping;     ಎಗು : rising, embarkation; 
ಎಗಡಿಗ : up and down;     ಏಳು : raise, get up
ಏವು ಎಂಬ ಪದವನ್ನು ನಾನು ಏಗು ಎಂದು ತೆಗೆದುಕೊಳ್ಳುವೆ. 
ಏಗು : manage, to find ways to go on functioning; to get along somehow; to succeed in handling matters; to cope with; to manage; to struggle to manage.

ವಚನಕಾರರು ಮತ್ತೆಮತ್ತೆ ಏವೆನಯ್ಯ! ಏವೆನೇವೆನಯ್ಯಾ! ಎಂದು ಬಳಸುವರು. ಏಗುವೆನಯ್ಯಾ ಎಂದರೂ ಇದೇ ಅರ್ಥ ಬರುವುದು.

ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ

ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ. 
ಬಂದಹರಯ್ಯ ಪುರಾತರೆನ್ನ ಮನೆಗೆ!  ಬಂದಹರಯ್ಯ ಶರಣರೆನ್ನ ಮನೆಗೆ! 
ಕಂಡ ಕನಸು ದಿಟವಾಗಿ, ಜಂಗಮ ಮನೆಗೆ ಬಂದರೆ 
ಶಿವಾರ್ಚನೆಯ ಮಾಡಿಸುವೆ ಕೂಡಲಸಂಗಮದೇವಾ ನಿಮ್ಮ ಮುಂದೆ.
          --- ಬಸವಣ್ಣ - Basavanna 
---
ಅಂಗೈ ತಿಂದುದು = ಕೈಯಲ್ಲಿ ನವೆಯಾದುದು

ಅಂಗೈ, ಅಂಗಾಲು, ಅಂಗಾತ ಮುಂತಾದ ಅನ್ ಬೇರಿನ ಪದಗಳಿವೆ. ಇದೇ ರೀತಿ ಅಂಗೈ ಮುಂಗೈ ಹಿಂಗೈ ಮೇಲುಗೈ ಈ ತರದ ಕಯ್ ಎನ್ನುವ ಬೇರು ಪದದ ಸುತ್ತ ಹುಟ್ಟಿದ ಪದಗಳೂ ಇವೆ.

ಕೈನ ನ ಅಡಿ > ಅಂಗೈ (ಅಂಶಿಸಮಾಸ) ಎನ್ನುವರು. ಸರಳವಾಗಿ ಅಡಿಯ ಕೈ > ಅಡಿಗೈ > ಅಂಗೈ ಆಗಿದೆ ಅನ್ನುವೆ.  

ಕೊಡುವಾಗ, ಆಣೆ‌ ಇಡುವಾಗ, ನೆಲಕ್ಕೆ ಕೈ ಊರುವಾಗ‌, ವಸ್ತುಗಳನ್ನು ಎತ್ತಿಕೊಳ್ಳುವಾಗ ಕೈನ ಬಿಳಿಭಾಗವನ್ನು ಕೆಳಗೆ (ಅಡಿಯಲ್ಲಿ) ಮಾಡುವೆವು. (ಈ ಬಿಳಿ ಭಾಗದ ಕಡೆಗೇ ಬೆರಳಿಗಳು ಮಡಚುವವು ಹಾಗಾಗಿ). ಹಾಗಾಗಿ ಈ ಕೈನ ಬಿಳಿಬಾಗ ಅಂಗೈ. 
--
ತೀಂಟೆ, ತಂಟೆ, #ತೀಟೆ, ತೀಟ, ತಿಂತಿ, ತಿಂತೆ, ತೀಂತೆ, #ತಿಂದೆ, ತೀಂದೆ‌, #ತಿಂಡಿ, ತಿಂಡೆ, ತಂಟೆ, ಇವುಗಳೆಲ್ಲ "ತೀನ್" ಎಂಬ ಒಂದೇ ಬೇರಿನ ಪದಗಳು. ಇದರ ಹುರುಳು ತುರಿಕೆ, ಕಡಿಯುವಿಕೆ, ಕೆರೆಯುವಿಕೆ, itching, arrogance, ಚೇಷ್ಟೆ ಮುಂತಾದವು. the sensation of itching. (fig.) the tendency of an arrogant person; arrogance.

ನಮ್ಮ ಕಡೆಯ ತಿಂಡಿ ಪದವು "ತಿನ್" ಎಂಬ ಬೇರಿನಿಂದ ಬಂದಿದೆ. ತಿನ್ನು, ತಿನಿಸು, ತಿಂಡಿ (ತಿಂಡಿಯನ್ನು ತಿನ್ನುವೆವು), ತೀನಿ (ಊಟ, ತೀನಿ ತಿನ್ನು) ಮುಂತಾದವು ಈ ಬೇರಿನವು.

"ಯಾಕೆ? ಏನು? ಕೈ ಕಡಿಯುತ್ತಾ?" ಅನ್ನುವ ಬೈಗುಳ ನಮ್ಮ ಕಡೆ‌ ಇದೆ. ಇದಕ್ಕೆ ಸರಿಸಾಟಿಯಾಗಿ ಉತ್ತರಕರ್ನಾಟದ ಭಾಗದಲ್ಲಿ #ತಿಂಡಿ ಎಂಬ ಬಳಕೆ ಇದೆ. ಇದರ ಹುರುಳು "ತುರಿಕೆ", ನವೆ, ಕಡಿತ. 
--

ಕಂಗಳು ಕೆತ್ತಿಹವು: 
ಊಟ ಮಾಡುವಾಗ ತುತ್ತು ಕೆಳಗೆಬಿದ್ದರೆ, ಮನೆ ಮೇಲೆ/ಎದುರು ಕಾಗೆ ಕೂಗಿದರೆ ನೆಂಟರು ಬರುವರು ಎಂಬ ಶಕುನಗಳಿವೆ. ಇದೇ ರೀತಿ ಬಲ ಅಂಗೈ ತುರಿಕೆಯಾದರೆ ಹಣ ಕೈ ಸೇರುತ್ತದೆ ಎನ್ನುವ ನಂಬಿಕೆಯ ಜೊತೆಗೆ ಎಡ ಅಂಗೈ ತುರಿಕೆಯಾದರೆ ಏನೋ ಕೆಟ್ಟ ಶಕುನ ಸಂಭವಿಸಲಿದೆ ಎನ್ನುವ ನಂಬಿಕೆಗಳೂ ಇವೆ.

#ಕೆತ್ತು ಅನ್ನುವ ಪದಕ್ಕೆ ಅದುರು (ಕಣ್ಣು ಅದುರುವವು) ನಡುಗು, ಹಾರು (ಹುಬ್ಬು ಹಾರುವವು) , shiver ಮುಂತಾದ ಹುರುಳಿದೆ. 
ಕಣ್ + ಕಳು > ಕಣ್‍ಗಳು > ಕಂಗಳು. 
ಕಂಗಳು ಕೆತ್ತಿಹವಯ್ಯ = ಕಣ್ಣಗಳು ಅದುರುತಿಹವು ಅಯ್ಯ.

ಬಲಗೈ ಕಡಿಯುವುದು, ಬಲಗಣ್ಣು ಹಾರುವುದು ಶುಭಶಕುನ. ಪುರಾತರು, ಶರಣರು, ಶಿವಭಕ್ತರು ಮನೆಗೆ ಬರುವುದರ ಶುಭ ಶಕುನ. ಬಸವಣ್ಣ ಕಂಡ ಕನಸೂ, ಕಾಣುವ ಕನಸೂ, ಎದುರು ನೋಡುವುದೂ ಇದನ್ನೇ. 
--

ಕಂಡ ಕನಸು, ತೋರಿದ ಶಕುನಗಳು ನಿಜವಾಗಿ ಜಂಗಮ ರೂಪದಲ್ಲಿ ಶರಣರು ಪುರಾತರು ಮನಗೆ ಬಂದರೆ ಅವರಿಂದ ಶಿವಾರ್ಚನೆ ಮಾಡಿಸುವೆ ಎನ್ನುವರು. ಬಸವಧರ್ಮದಲ್ಲಿ ಎದೆಯಲ್ಲಿನ ಲಿಂಗಕ್ಕೆ ನಮಗಿಂತ ದೊಡ್ಡವರು (ಗುರುಗಳು, ಸ್ವಾಮಿಗಳು, ಅಯ್ನರು) ಸಿಕ್ಕಾಗ ಅವರಿಂದಲೂ ಒಂದು ಪೂಜೆ ಮಾಡಿಸುವುದು ಸಂಪ್ರದಾಯ. ಬಸವಣ್ಣ ತನ್ನ ಮೈಮೇಲಿನ ಕೂಡಲಸಂಗಯ್ಯನಿಗೂ ಮನಗೆ ಬಂದ ಜಂಗಮ / ಪುರಾತ / ಶರಣರಿಂದ ಅರ್ಚನೆ ಮಾಡಿಸಲು ಎದುರು ನೋಡುತ್ತಿದ್ದಾರೆ. 
--

ಕನಸಲ್ಲೂ ಮನಸಲ್ಲೂ ನನಸಲ್ಲೂ ನೆನಪಲ್ಲೂ ಬದುಕಲ್ಲೂ ಬರೀ ಶರಣರೇ ಬಸವಣ್ಣನಿಗೆ!

ಕಾಯಗುಣಂಗಳ ಕಳೆದವರಿಗೆ ಶರಣೆಂಬೆ

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ

*ಅಭ್ಯಾಸ* ಎಂಬ ಪದವು ವ್ಯಾಕರಣ/ಪುರಾಣ/ಇತಿಹಾಸ/ಆಯುರ್ವೇದ/ಮೀಮಾಂಸೆ/ಯೋಗ/ಶೈವದರ್ಶನ ಗಳೆಲ್ಲದರಲ್ಲೂ ಮತ್ತೆ‌ಮತ್ತೆ ಬಳಸುವ technical word. ಈಗಿನ‌ ಬಳಕೆಯಲ್ಲಿ ಈ ಪದದ ಸರಳ ಹುರುಳು practice, regular habit, repetition ಮುಂತಾಗಿ ಹೇಳಬಹುದು.  

ಕರ್ಮಿ,ಮುಮುಕ್ಷು, ಅಭ್ಯಾಸಿ, ಅನುಭಾವಿ, ಆರೂಡರೆಂದು ಹಲವು ತೆರನ ರನ್ನು ಸಿದ್ದರಾಮೇಶ್ವರರು ಪಟ್ಟಿ ಮಾಡುವರು‌. ಇವರೆಲ್ಲರೂ ಹತ್ತಿರಿಂದ ನೋಡಿದರೆ ಬೇರೆ ಬೇರೆಯೇ ಮತ್ತು ಇವರೆಲ್ಲ ಮುಕ್ತಿಯ ಮಾರ್ಗದಲ್ಲಿ ಕ್ರಮವಾಗಿ ಜೋಡಿಸಲ್ಪಟ್ಟವರು. 

ಈ ವಚನವು ಬಸವಣ್ಣನ #ಆತ್ಮನಿವೇದನೆ ಯ ವಚನಗಳಲ್ಲೊಂದು. Practitioner ಹಂತದಲ್ಲಿದ್ದಾಗ ಬಸವಣ್ಣ ತಾನು ಪಟ್ಟ ತೊಳಲಾಟವನ್ನು ಈ ವಚನದಲ್ಲಿ ಹಿಡಿದಿಟ್ಟು ಕೊಟ್ಟಿದ್ದಾನೆ ಎನ್ನುವೆ. ಶರಣಮಾರ್ಗದ ಮೊದಲ ಹಂತವಾದ ಭಕ್ತಿ ಸಾಧನೆಯೇ ತನ್ನ ಕೈಲಿ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ತೊಳಲಾಟ ಇಲ್ಲಿದೆ.  ಈಗಿನ ಕಾಲದ, ಸಾಧನೆಯ ದಾರಿಯಲ್ಲಿನ ಭಕ್ತರಿಗೆ ಬಸವಣ್ಣ ನಡೆದ ದಾರಿಯ ಅನುಭವಗಳು‌ ದಾರಿದೀಪಗಳು.

ಮನಂ + ಪೊಗು > ಮನಂಬೊಗು ~ ಮನಂಬುಗು; 
ಹುಗಿ/ಪುಗಿ, ಹೊಕ್ಕು / ಪೊಕ್ಕು ಹೊಗು /ಪೊಗು ಇವೆಲ್ಲವೂ ಒಂದೇ ಬೇರಿನ ಪದಗಳು. ಮನಂಬೊಗು ಎಂದರೆ ಮನಸ್ಸಿಗೆ ನಾಟುವುದು, ಮನಸ್ಸಿಗೆ ‌ಇಳಿಯುವುದು, ಮನಸ್ಸಿಗೆ ಹೊಕ್ಕುವುದು. ಸಂಗಯ್ಯ-ಬಸವಯ್ಯರು ಒಬ್ಬರಮನದೊಳಗಿನ್ನೊಬ್ಬರಾಗದೆ ಈ ಕಾಯಗುಣಗಳು ಕಳೆಯವು. 

ಶರಣರು ಕಾಯಗುಣ-ಜೀವಗುಣ ಗಳ ಬಗ್ಗೆ‌ ಮತ್ತೆ‌ಮತ್ತೆ ಮಾತಾಡುವರು. ಮತ್ತು ಬಯಲಿಗೆ ಇವುಗಳ ಅಳಿವು‌ ಮುಖ್ಯವೆನ್ನುವರು. "ಬೇಕೆಂಬುದು ಕಾಯಗುಣ" ಎನ್ನುವರು ಚನ್ನಬಸವಣ್ಣ. "ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ - ಜೀವಗುಣದಿಂದ ಭವಕ್ಕೆ ಬೀಜವಾಗಿ" ಎನ್ನವರು ನಿಜಗುಣ ಶಿವಯೋಗಿಗಳು. "ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತು - ಆತ್ಮಸತಿ ಅರಿವು ಪುರುಷನಾದಲ್ಲಿಯೇ ಜೀವಗುಣ ನಿಂದಿತ್ತು." ಎನ್ನವನು‌ ಢಕ್ಕೆಯ ಬೊಮ್ಮಣ್ಣ. ಕಾಯಗುಣವಳಿದು ಕಾಯ ಲಿಂಗವಾಗುವುದು.
 
ಇಂತ ಕಾಯಗುಣವಳಿದವರ ತೋರಾ, ಅವರಿಗೆ ಶರಣೆಂಬೆ ಎಂಬ ಮಾತು ಬಸವಣ್ಣನವರದ್ದು. ಇಂತವರನ್ನು ಆರಿಸಿ ಆರಿಸಿಕೊಂಡು ಸೇರಿಸಿಕೊಂಡೇ ಬಸವಣ್ಣ‌ #ಅನುಭವಮಂಟಪ ಕಟ್ಟಿದ್ದು ಮತ್ತು #ಅನುಭಾವಿ ಗಳನ್ನು ಹುಟ್ಟುಹಾಕಿದ್ದು.

ಕೂಡಲಸಂಗನ ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ

ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ!
ಹಗಲಿರುಳಹುದು, ಇರುಳು ಹಗಲಹುದು!
ಎಂತಯ್ಯಾ! ಆಳವಾಡಿ ಕಳೆವೆನು?
ಒಂದು ಜುಗ ಮೇಲೆ ಕೆಡೆದಂತೆ!
ಕೂಡಲಸಂಗನ ಶರಣರನಗಲುವ ದಾವತಿಯಿಂದ
ಮರಣವೇ ಲೇಸು ಕಂಡಯ್ಯಾ.
-- ಬಸವಣ್ಣ - Basavanna 

"ಕಂಡರೆ" ಮತ್ತು "ಕಾಣದಿದ್ದರೆ" ಎಂಬುವು ಶರಣರ ಬಗೆಗಿನ‌ ಮಾತುಗಳು. ಬಸವಣ್ಣನವರಿಗೆ ಶರಣರನ್ನು ಕಂಡರೆ ಮನೋಹರ, ಕಾಣದಿದ್ದರೆ ಅವಸ್ಥೆ. ಶರಣರನ್ನು ಕಾಣದಿದ್ದರೆ ಹಗಲು‌ ಇರುಳಾಗಿ, ಇರುಳು ಹಗಲಾಗಿ ಕಂಡು, ಎಲ್ಲವೂ ಅಯೋಮಯ ಬಸವಣ್ಣನವರಿಗೆ. ಮಂಕು ಕವಿದಂತಾಗಿ ಮರುಳು ಮಾತುಗಳನ್ನಾಡುತ್ತಾ ಕಾಲ ಕಳೆವಂತಾಗುವುದು, ಯುಗವೇ (ಕಾಲವೇ) ಮೇಲೆ ತಿರುಗಿ ಬಿದ್ದಂತೆ ಅನ್ನಿಸುವುದು. ಶರಣರನ್ನು ಅಗಲಿ‌ ಇರುವುದು ಬಳಲಿಕೆ (ದಾವತಿ) ಬಸವಣ್ಣನಿಗೆ. ಈ ಬಳಲಿಕೆಗಿಂತ ಮರಣವೇ ಲೇಸು ಎಂಬುದು ಬಸವಣ್ಣನ ಅನುಭವ. ಶರಣರೊಡನೆ ಬೆರೆತು ಕಲೆತು ಬದುಕುವ ಬಸವಣ್ಣನ ಅಪೇಕ್ಷೆ ಬೆಲೆಕಟ್ಟಲಾಗದ್ದು.

--
ಮನೋಹರ ಅನ್ನುವುದಕ್ಕೆ ಹಲವು ಹುರುಳುಗಳನ್ನು ಹೇಳಬಹುದು.
೧. 
ಮನೋಹರ ~ ಮನ: ಹರ.  ಹರ ಎಂದರೆ‌‌ ಇಲ್ಲ ವಾಗಿಸುವುದು. ಲಯಸ್ತಿತಿ. ಯೋಗದ ಗುರಿಯೇ ಮನದ ಲಯ. Thoughtless state. #ಮನೋಹರಸ್ತಿತಿ ಯು ಯೋಗದ ಎತ್ತರದ ನೆಲೆ. ಶಿವನ ನೆಲೆಯೇ. 

೨. ಹರ ಎಂದರೆ ಸೆಳೆಯುವುದು, ಆಕರ್ಷಣೆ. ಮನಸ್ಸನ್ನು ಸೆಳೆಯುವದು. attractive; fascinating; charming; beautiful. ಹಾಗಾಗೇ ಶಿವನು‌ #ಮನೋಹರ.

೩. ಮನೋಹರ ಎಂದರೆ bliss, ಶಿವಾನಂದ.
"ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ #ಮನೋಹರಮೂರ್ತಿ ಇರವಿರಲು" -- ನೀಲಮ್ಮ

೪. 
ಆದಿ ಅನಾದಿಯೆ ಹಾವುಗೆ, ಶುದ್ಧ ಸಿದ್ಧವೆ ಪಾದದ ಜಂಗು,
ಪ್ರಸಿದ್ಧವೆ ಗಮನ, #ಮನೋಹರವೆ ಕಟಿ,
ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ,
ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು ... ಜಕ್ಕಣಯ್ಯ

೫. ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ, ಆರು ಬಾಗಿಲು, ಮೂರು ಮಂಟಪವು, #ಮನೋಹರನೆಂಬ ಪೂಜಾರಿ

ಇನ್ನೂ ಹಲವು ಅರ್ಥಗಳನ್ನು ಹೇಳಬಹುದಾದರೂ‌ ಇಲ್ಲಿ ಮನೋಹರ ಎಂದರೆ ನಲಿವು, ಸುಂದರ , ಸೊಗಸು, attractive; fascinating; charming; beautiful ಎನ್ನುವುದು ಹೊಂದುವುದು.

--
ಅವಸ್ಥೆ ಎಂದರೆ ಪಾಡು, ಇರವು. ವಿಶೇಷವಾದ ಅವಸ್ಥೆ ~ ವ್ಯವಸ್ಥೆ - ಏರ್ಪಾಡು.
"ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ #ಅವಸ್ಥೆ ಮಾಣದು" - ಅಲ್ಲಮ
#ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ, ಕಳೆ ಕಳೆಗಳು ಒಂದಾದ ಪರಿಯ ನೋಡಾ! - ಅಲ್ಲಮ
ಅಂಗದ ಅವಸ್ಥೆಯಲ್ಲದೆ ಲಿಂಗದ #ಅವಸ್ಥೆ ಆರಿಗೂ ಇಲ್ಲ ಗುಹೇಶ್ವರಾ - ಅಲ್ಲಮ
ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. -- ಮುಕ್ತನಾಥಯ್ಯ.

ಅವಸ್ಥೆ ಎಂಬ ಪದಕ್ಕೆ ‌negative ಅರ್ಥಗಳೇ ಸಿಕ್ಕಿರುವಂತಿದೆ. ದುರ್ದೆಸೆ, ಕೆಟ್ಟಸ್ತಿತಿ, ಒಳ್ಳೆಯದಲ್ಲದ ಪಾಡು. ಶರಣರನ್ನು ಕಾಣದಿದ್ದರೆ ಸಹಜವಲ್ಲದ ಪಾಡು ಬಸವಣ್ಣನವರದ್ದು. ಹಗಲು ಇರುಳಂತೆ (ಒಳಗೆ / ಮನಕ್ಕೆ ಮಂಕು, ಹೊರಗೆ ಮೋಡ ಕವಿದು ಕತ್ತಲಾದಂತೆ), ಇರುಳು ಹಗಲಂತೆ (ನಿದ್ದೆ ಬಾರದೆ ಅದೇ ಹಗಲಂತೆ) ಎಲ್ಲವೂ ಅಯೋಮಯವಾದಂತೆ ಬಸವಣ್ಣನವರಿಗೆ.

ಆಳವಾಡು ಎಂದರೆ ಬುಗುಲು ಮಾತು, ತೋರಿಕೆ ಹಾರಿಕೆಯ ಮಾತು, ವಟವಟಮಾತು. ಅಳುತ್ತಾ, ಮರುಗುತ್ತಾ ಇರು.
ಅಳ್ಳಪ a chatterer; ಅಳಪ್ಪು  to chatter, prattle, talk nonsense; ಅಳವಳಿಮೆ babbling;

ಕೊಡನ ತುಂಬಿದ ಹಾಲ ಕೆಡಹಿ, ಉಡುಗಲೆನ್ನಳವೆ

ಮುನ್ನೂರರವತ್ತು ದಿನ ಶ್ರವವ ಮಾಡಿ, ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ?
ಕೊಡನ ತುಂಬಿದ ಹಾಲ ಕೆಡಹಿ, ಉಡುಗಲೆನ್ನಳವೆ ಕೂಡಲಸಂಗಮದೇವಾ? 
- ಬಸವಣ್ಣ - Basavanna 

ಇದು ಭಕ್ತನ #ಭಕ್ತಸ್ಥಲ ದ ವಚನ. ಈ ವಚನದಲ್ಲೂ ಕೂಡ ಭಕ್ತಿಯನ್ನು ಕಾಳಗಕ್ಕೆ ಹೋಲಿಸಿದ್ದಾರೆ. 
ಶ್ರವದ ಉದ್ದೇಶವೇ ಯುದ್ದದಲ್ಲಿ ಗೆಲ್ಲುವುದು. ವರ್ಷಪೂರ್ತಿ ಯುದ್ದಾಭ್ಯಾಸ ಮಾಡಿ ಯುದ್ಧರಂಗದಲ್ಲಿ ಶಸ್ತ್ರ ಬಳಸುವುದನ್ನು ಮರೆತರೆ ಏನು ಪ್ರಯೋಜನ? ಲಿಂಗಾರ್ಚನೆಯ ಉದ್ದೇಶವೇ ಮನ ದೃಡವಾಗುವುದು. ಲೆಕ್ಕವಿಲ್ಲದಷ್ಟು ಕಾಲ ಲಿಂಗಾರ್ಚನೆ ಮಾಡಿ ಮನ ದೃಡವಾಗದಿದ್ದರೆ ಏನು‌ ಪ್ರಯೋಜನ?. ತುಂಬಿದ ಕೊಡದ ಹಾಲನ್ನು ಅಜಾಗರೂಕತೆಯಿಂದ ಚೆಲ್ಲಿ.. ‌ಮತ್ತೆ ಆ ಹಾಲನ್ನು ಮರಳಿ ಬಳಿದು ಕೊಡಕ್ಕೆ ತುಂಬಲು ತನ್ನಿಂದ ಆಗದು‌ ಎನ್ನುವರು ಬಸವಣ್ಣ.

ಒಂದು ಸಣ್ಣ ತಪ್ಪು/ಕೈಮರೆವು /ಮೈಮರೆವು/ಮತಿಮರೆವು ನಿಂದ ಹಿಂದೆ ಮಾಡಿದ ಸಾಧನೆಗಳಲ್ಲಾ ವ್ಯರ್ಥವಾಗುವುದು. ಕೊನೆ ಕ್ಷಣದಲ್ಲಿ ಕೈ ಸೋಲುವ, ಅವಶ್ಯಕತೆ ಬಿದ್ದಾಗಲೇ ನಡೆಸಿದ ತಯಾರಿ ಕೈ ಕೊಡುವುದರ ಬಗ್ಗೆ ಈ ಮಾತುಗಳು. ಇಲ್ಲೆಲ್ಲಾ ಮನಸ್ಸಿನ ದೃಡತೆ ಮುಖ್ಯ. ದೃಡಭಕ್ತಿ, ದೃಡಭಾವ, ದೃಡಚಿತ್ತ, ದೃಡತಪ‌ ಗಳ ಬಗ್ಗೆ ಶರಣರು ಮಾತಾಡುವರು.

ಸಾಧನೆಯ ಹಾದಿಯಲ್ಲಿ ಒಂದು ಕ್ಷಣವೂ ಮೈಮರೆಯಬಾರದು ಎನ್ನುವ ಕಿವಿಮಾತುಗಳಿವೆ ಈ ವಚನದಲ್ಲಿ. ಬುದ್ದಿ ಮಾತುಗಳನ್ನು ತನಗೇನೆ ಅನ್ವಯಿಸಿಕೊಂಡು ಹೇಳುವ ದೊಡ್ಡತನ ಬಸವಣ್ಣನವರದ್ದು. 

ಪದಗಳ ಬಗ್ಗೆ: 
ಮುನ್ನೂರರವತ್ತು:  ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ‌ 360 ದಿನಗಳು. ಬಸವಣ್ಣನ ವಚನವು ಆಗ ಚಾಂದ್ರಮಾನ ‌ಪಂಚಾಂಗದ ಬಳಕೆಯನ್ನು ತೋರುತ್ತಿದೆ. 
ಶ್ರವ‌:  A training in using weapons.
ಕಳ : battle ground, ಅಂಕ, ಯುದ್ದಭೂಮಿ.      ಕಳನೇರಿ : ಕಾಳಗಕ್ಕೆ ಇಳಿದು.
ಕೈಮರೆ : ಕತ್ತಿ/ಗುರಾಣಿ/ಬಿಲ್ಲು/ಬಾಣ/ ಶಸ್ತ್ರ ಗಳನ್ನು ಬಳಸುವುದನ್ನು ಮರೆಯುವುದು.
ಏವು : what to do.  ಏವಯಿಸು : to be dissatisfied; to have displeasure; to sorrow; to feel agony; to grieve.   ಏವೆ : ನೋವು‌ ಪಡುವೆ, ಹೇಗುವೆ
ದೃಡ : firmly established. ಈ ಪದ ಮನಸ್ಸಿನ ಬಗ್ಗೆ. 
ಉಡುಗು : The act or process of brooming; a sweeping. to withdraw - a) to take back or draw back; b) to remove from use; c) to retract or recall.   ಇಡುಗಲು / ಉಡುಗಲು : ಕಸಬರಿಕೆ, broom.

ಜೀಯ-ಜೀವ ನ್ಯಾಯಗಳು

ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ, 
ಕಾದಿ ಗೆಲಿಸಯ್ಯಾ ಎನ್ನನು
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ, 
ಎನ್ನ ತನು-ಮನ -ಧನದಲ್ಲಿ ವಂಚನೆಯಿಲ್ಲದೆ - #ಬಸವಣ್ಣ 
--

ಜೀಯ/ಜೀವ ರ ನಡುವೆ ಮೂರು ನ್ಯಾಯಗಳನ್ನು  ಗುರುತಿಸಿರುವರು. ಮಾರ್ಜಾಲ ಕಿಶೋರ ನ್ಯಾಯ, ಮರ್ಕಟ ಕಿಶೋರ ನ್ಯಾಯ ಮತ್ತು ಮತ್ಸ್ಯ ಕಿಶೋರ ನ್ಯಾಯ. 

೧. ಮಾರ್ಜಾಲ ಕಿಶೋರ ನ್ಯಾಯ:  ಬೆಕ್ಕು ತನ್ನ ಮರಿಯನ್ನು ತಾನೇ ಕಚ್ಚಿ ಹಿಡಿದು ಒಂದ ನೆಲೆಯಿಂದ ಇನ್ನೊಂದು ನೆಲೆಗೆ ಸಾಗಿಸಿ ಕಾಪಾಡುವುದು. ಮರಿಯ ಪ್ರಯತ್ನ ‌ಏನೂ‌ ಇಲ್ಲ.

೨. ಮರ್ಕಟ ಕಿಶೋರ ನ್ಯಾಯ: ತಾಯಿ‌ಮಂಗವು ತನ್ನ ಮರಿಯನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಮರಿಯೇ ತನ್ನ ತಾಯಿಯನ್ನು ಗಟ್ಟಿಯಾಗಿ ಅವುಚಿಕೊಳ್ಳುವುದು. ತಾಯಿ ಪಾತ್ರ ರಕ್ಷಣೆಯಲ್ಲಿ ಇಲ್ಲ. ಎಲ್ಲ ಪ್ರಯತ್ನ ವೂ ಮರಿಯದ್ದೇ.

೩. ಮತ್ಸ್ಯ ಕಿಶೋರ ನ್ಯಾಯ : ಮರಿ‌ಮೀನು‌ ನೆನೆದರೆ ತಾಯಿ‌ಮೀನು ಆಸರೆಗೆ ಓಡಿಬರುವುದು. ಇಬ್ಬರ ಪ್ರಯತ್ನವೂ ಇದೆ..

ಈ ವಚನದಲ್ಲಿ ಬಸವಣ್ಣ ತನ್ನ ಇಡೀ ಭಾರವನ್ನು ಕೂಡಲಸಂಗಯ್ಯನ ಮೇಲೆ ಹಾಕಿದ್ದಾರೆ. #ಮತ್ಸ್ಯ_ಕಿಶೋರ_ನ್ಯಾಯ ಇಲ್ಲಿದೆ ಎನ್ನಬಹುದು.

ಕೂಡಲಸಂಗಯ್ಯನ ನೆನೆದರೆ,ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.

ಅಂಕ ಕಳನೇರಿ ಕೈ ಮರೆದಿರ್ದೊಡೆ ಮಾರಂಕ ಬಂದಿರುವುದ ಮಾಣ್ಬನೆ?
ನಿಮ್ಮ ನೆನಹ ಮತಿ ಮರೆದಿರ್ದೊಡೆ, ಪಾಪ ತನುವನಂಡಲೆವುದ ಮಾಣ್ಬುದೆ?
ಕೂಡಲಸಂಗಯ್ಯನ ನೆನೆದರೆ,ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ. - #ಬಸವಣ್ಣ 

ಪದಗಳು; 
ಅಂಕೆ (ಹಿಡಿತ) ಯಲ್ಲಿಡುವವ ಅಂಕ. ಸೈನಿಕ. ಅಂಕುಶವೂ ಇದೇ ಬೇರಿನ ಪದ. ಅಂಕ/ಮಾರಂಕ - ಸೈನಿಕ / ಎದುರುಪಡೆಯ ಸೈನಿಕ. 
ಕಣ/ ಕಳ - ಅಂಗಣ / ಅಂಗಳ / ಅಂಕಲು ದಲ್ಲೂ ಈ‌ ಕಳ ಪದವಿದೆ. War-ground / playground. A wide area where a battle is fought; a battlefield. A place where game or games are played; 
ಕಾದುವುದರಿಂದ ಕದನ. ಕಳದಲ್ಲಿ ಕಾದುವುದೇ ಕಾಳಗ.
ಕೈಮರೆ ಮೈಮರೆ ಮುಂತಾದ ಪದಗಳಿವೆ. ಕಾಳಗದಲ್ಲಿ ಕತ್ತಿ/ಗುರಾಣಿ, ಬಿಲ್ಲು/ಬಾಣ ಗಳನ್ನು ಹಿಡಿದ ಅಂಕನು ಎಚ್ಚರ ತಪ್ಪಬಾರದು. #ಕೈಮರೆ ತರೆ ಇದಿರಾಳು / ಮಾರಂಕ ನು ಬಂದು ಇರಿಯದೆ ಬಿಡನು!

ಭಕ್ತಿಯೂ ಕಾಳಗದ ರೀತಿ. #ಮತಿಮರೆ ಯಬಾರದು. ಮರೆತರೆ ಪಾಪವು ತನುವನ್ನು ಅಂಡಲೆವುದ ಮಾಡದೆ‌ ಬಿಡದು. ಅಂಡಲೆ ಎಂದರೆ  ೧ ಕಾಡು, ಪೀಡಿಸು ೨ ಕಷ್ಟಕ್ಕೆ ಒಳಗು ಮಾಡು, ೩ ಪೀಡೆ ೪ ಹಿಂಸೆ. ಕೆಲವೆಡೆ "ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!" ಎನ್ನುವರು ಬಸವಣ್ಣ.

ಕಾಳಗಕ್ಕೂ ಭಕ್ತಿಗೂ ಹೋಲಿಕೆಯಿದೆ.  ಭಕ್ತನಿಗೂ ಸೈನಿಕನಿಗೂ ಅಬೇಧವಿದೆ. 
ಕಾಳಗದಲ್ಲಿ ಕೈ ಮರೆಯಬಾರದು. ಭಕ್ತಿಯಲ್ಲಿ ಮತಿಮರೆಯಬಾರದು. 
ಪಾಪಕ್ಕೂ ಕತ್ತಿಗೆ ಹೊಲಿಕೆಯಿದೆ. ಕಾಳಗದಲ್ಲಿ ಸದಾ ಶಸ್ತ್ರಗಳು ಆಡುತ್ತಿರಬೇಕು. ಭಕ್ತಿಯಲ್ಲಿ ಸದಾ ಕೂಡಲಸಂಗನ ನೆನಹು ಗುನುಗುನುಸಿತರಬೇಕು. ಇಲ್ಲದಿದ್ದರೆ ಕಾಳಗದಲ್ಲಿ ಎದುರಾಳಿಯ ಕತ್ತಿ ಮೈಯನ್ನು ಇರಿದು ಹಿಂಸೆಯಾಗುವುದು .. ಭಕ್ತಿಯಲಿ ಪಾಪವು ತನುವನ್ನು ಪೀಡಿಸುವುದು. 

#ಹಂಡಲೆ ಯುವುದು ಎನ್ನುವ ಪದ‌ ಇದೆ.. ನಾವೆಲ್ಲ ಹುಡುಗರಾಗಿದ್ದಾಗ..  "ಓದಲ್ಲ ಪಾದಲ್ಲ ಕೆಲಸ ಮಾಡಲ್ಲ.. ಬರೇ ಹಂಡಲೆಯುತ್ತಾನೆ" ಅಂತ ಬೈಸಿಕೊಂಡವರೇ..  ಈ ವಚನ ದಲ್ಲಿ ಪಾಪವು ಒಂದು ಹುಟ್ಟಿನಿಂದ ಇನ್ನೊಂದು ಹುಟ್ಟಿಗೆ ಹಂಡಲೆಯುವಂತೆ ಮಾಡುವುದು ಎಂಬ ಅರ್ಥ ಕೊಡುವುದು. ಮುಕ್ತಿಗೆ ಮದ್ದು ಓಂ ನಮಃ ಶಿವಾಯ ಎಂಬ ಮಂತ್ರ ಎನ್ನುವುದನ್ನು ಬಸವಣ್ಣ ಈ ತರ ಹೇಳಿದ್ದಾರೆ.

ಕೂಡಲಸಂಗಯ್ಯನ ನೆನೆದರೆ ಪಾಪವು ಉರಿಗೆ ಒಡ್ಡಿದ ಅರಗಿನಂತೆ ಕರಗುವುದು. ಇಲ್ಲಿ ಕರ್ಪುರಕ್ಕೂ ಒಂದು ವಿಶೇಷತೆ ಇದೆ. #ಶಿಖಿಕರ್ಪುರಯೋಗ ಎಂದು ಶರಣರು ಆಗಾಗ್ಗೆ ಬಳಸುವರು. ಕರ್ಪೂರ ಕರಗಿದರೆ ಅಲ್ಲಿ ಬೂದಿ /ಕಲೆ ಮುಂತಾದವೇನೂ ಉಳಿಯುವುದಲ್ಲ. ಕೂಡಲಸಂಗಯ್ಯನನ್ನು ನೆನದರೆ ಪಾಪವೂ ಕರ್ಪುರದಂತೆ ಸಂಪೂರ್ಣ ಮಾಯವಾಗುವುದು. ಏನೂ ಉಳಿಯದು

ಈ ವಚನದಲ್ಲಿ #ಉಪಮೆ ಇದೆ .ದೃಷ್ಟಾಂತ ವಿದೆ. ಬಸವಣ್ಣನ ವಚನಗಳಲ್ಲಿನ #ಅಲಂಕಾರ ಗಳ ಬಗ್ಗೆ ಮಾತಾಡ್ತಾಲೇ ಹೋಗಬಹುದು.

ವಚನಗಳಲ್ಲಿ ಸಿದ್ದಾಂತಶಿಖಾಮಣಿ

ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ?
ಕೋಳದ ಮೇಲೆ ಸಂಕಲೆಯನಿಕ್ಕುವರೆ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ?
ಕೂಡಲಸಂಗಯ್ಯನ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೇ?        
                  - ಬಸವಣ್ಣ - Basavanna 

ಸಿರಿಯಾಳ 63 ಜನ #ಪುರಾತನ ರಲ್ಲಿ ಒಬ್ಬ. ಈ ಪುರಾತನ ರು ದೊಡ್ಡ ಶಿವಭಕ್ತರು. ಆದರೆ ಇಷ್ಟಲಿಂಗಧಾರಿಗಳಲ್ಲ. ಶರಣರಿಗೆ ಇವರ ಬಗ್ಗೆ ತುಂಬಾ ಪ್ರೀತಿ - ಮತ್ತೆ ಮತ್ತೆ ನೆನೆವರು.

ಶರಣರು ಅಲ್ಲಲ್ಲಿ ಶಿವ #ಗಣ ಗಳನ್ನೂ ನೆನೆವರು‌. ಇವರೂ ಕೂಡೂ ಲಿಂಗಧಾರಿಗಳಲ್ಲ.

ಕೇವಲ ಶಿವಭಕ್ತಿ ಇದ್ದ ಕಾರಣಕ್ಕಾಗಿಯೇ ಲಿಂಗಧಾರಿಗಳಲ್ಲದವರನ್ನೂ ನೆನೆವ ಶರಣರು ಅದೇಕೆ ಲಿಂಗಧಾರಿಗಳಾದವರನ್ನೇ - ಮತ್ತು ಜಗತ್ತಿಗೆ ಈ‌ ಇಷ್ಟಲಿಂಗದ ಕಲ್ಪನೆ ಕೊಟ್ಟವರನ್ನೇ ನೆನೆಯಲಿಲ್ಲ?!
ಉತ್ತರ ಸ್ಪಷ್ಟ: ೧೨ ನೇ ಶತಮಾನಕ್ಕಿನ್ನೂ ಈ ನಾಲಕ್ಕು ಅತ್ವಾ ಐದು ಜನರು ಇರಲಿಲ್ಲ. 

ಜೈನ ಬೌದ್ದ ವೇದ ಉಪನಿಷತ್ತು ಆಗಮ (ಇವು ಯಾವೂ ಶರಣರ ಸಂಪ್ರದಾಯ ಅಲ್ಲದಿದ್ದರೂ) ಗಳನ್ನು ಉಲ್ಲೇಖಿಸುವ ಶರಣರು ತನ್ನದೇ ಸಂಪ್ರದಾಯವಾದ ಸಿದ್ದಾಂತಶಿಖಾಮಣಿ ಯ ಒಂದು ಸಾಲನ್ನೂ ಯಾಕೆ ಉಲ್ಲೇಖಿಸಿಲ್ಲ..  
ಕಾರಣ ಸ್ಪಷ್ಟ.. ಆಗಿನ್ನೂ ಈ‌ ಪುಸ್ತಕ ಸಂಕಲನ ಗೊಂಡಿರಲಿಲ್ಲ.

ಭವತಿ ಭಿಕ್ಷಾಂ ದೇಹಿ!

ಭವತಿ ಭಿಕ್ಷಾಂ ದೇಹಿ! ಎಂಬ ಮಾತನ್ನು ಹಳೆಯ ನಾಟಕ ಸಿನಿಮಾಗಳಲ್ಲಿ ಶಿವಯೋಗಿಗಳ ಬಾಯಲ್ಲಿ ಕೇಳೇ ಇರುತ್ತೇವೆ.  ಶಂಕರನೇ ಬ್ರಹ್ಮಕಪಾಲ ವನ್ನು ಹಿಡಿದು ಭಿಕ್ಷೆ ಬೇಡುವಂತ ಪರಿಸ್ಥಿತಿ ಬಂತು. ಕೊನೆಗೆ ಅನ್ನಪೂರ್ಣೆ ನೀಡಿದ ಭಿಕ್ಷೆಯಿಂದ ಅವನ ಭಿಕ್ಷಾಟನೆ ನಿಂತಿತು.

#ಭವತಿ : ಭವ ಎಂದರೆ ಇರುವು. ಭವತಿ ಎಂದರೆ ಆಗು, to become. ಆದರೆ ಇಲ್ಲಿ ಭವತಿ ಎನ್ನುವ ಪದದ ಹೋಲಿಕೆ "ಶ್ರೀಮತಿ" ಅನ್ನುವ ಪದದೊಂದಿಗೆ ಇದೆ. ಭವತಿ ಎಂದರೆ ಒಡತಿ,‌ lady, your ladyship, lady, ಪೂಜ್ಯೆ, ಪೂಜ್ಯಳೇ ಎಂದಾಗುವುದು.

#ದೇಹಿ : ದೇಹವುಳ್ಳದ್ದು ದೇಹಿ. ದೇಹವಿರುವ ಕಾರಣಕ್ಕೇ ಅಲ್ಲವೇ ದೇಹಿ ಎಂದು ಬೇಡುತ್ತಿರುವುದು!! ಈ ಸಂದರ್ಭದಲ್ಲಿ ಜೇಡರ ದಾಸಿಮಯ್ಯ ನ ಈ ವಚನ ನೆನಪಾಗುವುದು.
"ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ. ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ."

ಪ್ರಜಾಪತಿಯ ದ ಎಂಬ ಅಕ್ಷರ ವನ್ನು ಮನುಷ್ಯರು ದಾನ, ದೇವತೆಗಳು ದಮ (ಇಂದ್ರಿಯ ನಿಗ್ರಹ), ದಾನವರು ದಯೆ‌ ಎಂದೂ ತೆಗೆದುಕೊಂಡು ಅರ್ಥಮಾಡಿಕೊಳ್ಳುವಂತಾಯಿತು. 

ಇಲ್ಲಿನ ದೇಹಿ ಯ ಬೇರು ಬೇರೆ. ದೇಹಿ ಅನ್ನುವುದು an indeclinable used in begging alms. ದಾ ಎಂದರೆ‌ ಕೊಡು.‌ ಹಿಂದಿಯ ದೇ (ಕೊಡು) ಕೂಡ ಇದರ ಇನ್ನೊಂದು‌ ರೂಪವೆ. ದಾನ ಮತ್ತು ದೇಹಿ ಒಂದೇ ಬೇರಿನ ಪದಗಳಾಗಿರಲು ಸಾಧ್ಯ. ಲೇವಾದೇವಿ ಯಲ್ಲಿನ ದೇವಿ ಇದೇ ದೇಹಿ. 

#ಭಿಕ್ಷೆ : ೧. Asking, begging, soliciting, ೨. anything given as alms, alms; ೩. Wages, hire. ೪. Service. ೫. A means of subsistence, ಬದುಕಿರಲು ಬಳಸುತ್ತಿದ್ದ ದಾರಿ. ಭಿಕ್ಷು, ಭಿಕ್ಷಾಟನೆ, ಭಿಕ್ಷಾನ್ನ, ಭಿಕ್ಷಾರ್ಥಿ, ಭಿಕ್ಷಾಪಾತ್ರೆ, ಭಿಕ್ಷಾವೃತ್ತಿ  ಮುಂತಾದ ಪದಗಳಿವೆ.

ಸಂಸ್ಕೃತ ಮತ್ತು ಇಂಗ್ಲಿಷ್ ಗಳು ಒಂದೇ ನುಡಿಗುಂಪಿಗೆ ಸೇರಿದ ನುಡಿಗಳು. ಸಂಸ್ಕೃತದ "ಭಿಕ್ಷ್" ಮತ್ತು ಇಂಗ್ಲಿಷ್ ನ "beg" ಒಂದೇ ಬೇರಿನವು. ಎರಡಕ್ಕೂ "ಭೆಗ್ / ಭೆಕ್" ಎಂಬ ಒಂದೇ ಬೇರಿದೆ.

ಕನ್ನಡದಲ್ಲಿ ಭಿಕ್ಷ್ ಎಂದರೆ "ಬೇಡು", ಭಿಕ್ಷೆ ಎಂದರೆ "ಬೇಡಿದ ಅನ್ನ".

ಭಾನುವಾರ, ಆಗಸ್ಟ್ 25, 2024

ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ

ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ!
ಹಗಲಿರುಳಹುದು, ಇರುಳು ಹಗಲಹುದು!
ಎಂತಯ್ಯಾ! ಆಳವಾಡಿ ಕಳೆವೆನು?
ಒಂದು ಜುಗ ಮೇಲೆ ಕೆಡೆದಂತೆ!
ಕೂಡಲಸಂಗನ ಶರಣರನಗಲುವ ದಾವತಿಯಿಂದ
ಮರಣವೇ ಲೇಸು ಕಂಡಯ್ಯಾ.
-- ಬಸವಣ್ಣ - Basavanna 

"ಕಂಡರೆ" ಮತ್ತು "ಕಾಣದಿದ್ದರೆ" ಎಂಬುವು ಶರಣರ ಬಗೆಗಿನ‌ ಮಾತುಗಳು. ಬಸವಣ್ಣನವರಿಗೆ ಶರಣರನ್ನು ಕಂಡರೆ ಮನೋಹರ, ಕಾಣದಿದ್ದರೆ ಅವಸ್ಥೆ. ಶರಣರನ್ನು ಕಾಣದಿದ್ದರೆ ಹಗಲು‌ ಇರುಳಾಗಿ, ಇರುಳು ಹಗಲಾಗಿ ಕಂಡು, ಎಲ್ಲವೂ ಅಯೋಮಯ ಬಸವಣ್ಣನವರಿಗೆ. ಮಂಕು ಕವಿದಂತಾಗಿ ಮರುಳು ಮಾತುಗಳನ್ನಾಡುತ್ತಾ ಕಾಲ ಕಳೆವಂತಾಗುವುದು, ಯುಗವೇ (ಕಾಲವೇ) ಮೇಲೆ ತಿರುಗಿ ಬಿದ್ದಂತೆ ಅನ್ನಿಸುವುದು. ಶರಣರನ್ನು ಬಿಟ್ಟಿರುವುದಕ್ಕಿಂತ ಮರಣವೇ ಲೇಸು ಎಂಬುದು ಬಸವಣ್ಣನ ಅನುಭವ. ಶರಣರೊಡನೆ ಬೆರೆತು ಕಲೆತು ಬದುಕುವ ಬಸವಣ್ಣನ ಅಪೇಕ್ಷೆ ಬೆಲೆಕಟ್ಟಲಾಗದ್ದು.

--
ಮನೋಹರ ಅನ್ನುವುದಕ್ಕೆ ಹಲವು ಹುರುಳುಗಳನ್ನು ಹೇಳಬಹುದು.
೧. 
ಮನೋಹರ ~ ಮನ: ಹರ.  ಹರ ಎಂದರೆ‌‌ ಇಲ್ಲ ವಾಗಿಸುವುದು. ಲಯಸ್ತಿತಿ. ಯೋಗದ ಗುರಿಯೇ ಮನದ ಲಯ. Thoughtless state. #ಮನೋಹರಸ್ತಿತಿ ಯು ಯೋಗದ ಎತ್ತರದ ನೆಲೆ. ಶಿವನ ನೆಲೆಯೇ. 

೨. ಹರ ಎಂದರೆ ಸೆಳೆಯುವುದು, ಆಕರ್ಷಣೆ. ಮನಸ್ಸನ್ನು ಸೆಳೆಯುವದು. attractive; fascinating; charming; beautiful. ಹಾಗಾಗೇ ಶಿವನು‌ #ಮನೋಹರ.

೩. ಮನೋಹರ ಎಂದರೆ bliss, ಶಿವಾನಂದ.
"ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ #ಮನೋಹರಮೂರ್ತಿ ಇರವಿರಲು" -- ನೀಲಮ್ಮ

೪. 
ಆದಿ ಅನಾದಿಯೆ ಹಾವುಗೆ, ಶುದ್ಧ ಸಿದ್ಧವೆ ಪಾದದ ಜಂಗು,
ಪ್ರಸಿದ್ಧವೆ ಗಮನ, #ಮನೋಹರವೆ ಕಟಿ,
ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ,
ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು ... ಜಕ್ಕಣಯ್ಯ

೫. ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ, ಆರು ಬಾಗಿಲು, ಮೂರು ಮಂಟಪವು, #ಮನೋಹರನೆಂಬ ಪೂಜಾರಿ

ಇನ್ನೂ ಹಲವು ಅರ್ಥಗಳನ್ನು ಹೇಳಬಹುದಾದರೂ‌ ಇಲ್ಲಿ ಮನೋಹರ ಎಂದರೆ ನಲಿವು, ಸುಂದರ , ಸೊಗಸು, attractive; fascinating; charming; beautiful ಎನ್ನುವುದು ಹೊಂದುವುದು.

--
ಅವಸ್ಥೆ ಎಂದರೆ ಪಾಡು, ಇರವು. ವಿಶೇಷವಾದ ಅವಸ್ಥೆ ~ ವ್ಯವಸ್ಥೆ - ಏರ್ಪಾಡು.
"ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ #ಅವಸ್ಥೆ ಮಾಣದು" - ಅಲ್ಲಮ
#ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ, ಕಳೆ ಕಳೆಗಳು ಒಂದಾದ ಪರಿಯ ನೋಡಾ! - ಅಲ್ಲಮ
ಅಂಗದ ಅವಸ್ಥೆಯಲ್ಲದೆ ಲಿಂಗದ #ಅವಸ್ಥೆ ಆರಿಗೂ ಇಲ್ಲ ಗುಹೇಶ್ವರಾ - ಅಲ್ಲಮ
ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. -- ಮುಕ್ತನಾಥಯ್ಯ.

ಅವಸ್ಥೆ ಎಂಬ ಪದಕ್ಕೆ ‌negative ಅರ್ಥಗಳೇ ಸಿಕ್ಕಿರುವಂತಿದೆ. ದುರ್ದೆಸೆ, ಕೆಟ್ಟಸ್ತಿತಿ, ಒಳ್ಳೆಯದಲ್ಲದ ಪಾಡು. ಶರಣರನ್ನು ಕಾಣದಿದ್ದರೆ ಸಹಜವಲ್ಲದ ಪಾಡು ಬಸವಣ್ಣನವರದ್ದು. ಹಗಲು ಇರುಳಂತೆ (ಒಳಗೆ / ಮನಕ್ಕೆ ಮಂಕು, ಹೊರಗೆ ಮೋಡ ಕವಿದು ಕತ್ತಲಾದಂತೆ), ಇರುಳು ಹಗಲಂತೆ (ನಿದ್ದೆ ಬಾರದೆ ಅದೇ ಹಗಲಂತೆ) ಎಲ್ಲವೂ ಅಯೋಮಯವಾದಂತೆ ಬಸವಣ್ಣನವರಿಗೆ.

ಆಳವಾಡು ಎಂದರೆ ಬುಗುಲು ಮಾತು, ತೋರಿಕೆ ಹಾರಿಕೆಯ ಮಾತು, ವಟವಟಮಾತು. ಅಳುತ್ತಾ, ಮರುಗುತ್ತಾ ಇರು.
ಅಳ್ಳಪ a chatterer; ಅಳಪ್ಪು  to chatter, prattle, talk nonsense; ಅಳವಳಿಮೆ babbling;

ಶನಿವಾರ, ಆಗಸ್ಟ್ 24, 2024

ಬಂದಹರಯ್ಯ ಶರಣರೆನ್ನ ಮನೆಗೆ!

ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ. 
ಬಂದಹರಯ್ಯ ಪುರಾತರೆನ್ನ ಮನೆಗೆ!  ಬಂದಹರಯ್ಯ ಶರಣರೆನ್ನ ಮನೆಗೆ! 
ಕಂಡ ಕನಸು ದಿಟವಾಗಿ, ಜಂಗಮ ಮನೆಗೆ ಬಂದರೆ 
ಶಿವಾರ್ಚನೆಯ ಮಾಡಿಸುವೆ ಕೂಡಲಸಂಗಮದೇವಾ ನಿಮ್ಮ ಮುಂದೆ.
          --- ಬಸವಣ್ಣ - Basavanna 

ಅಂಗೈ ತಿಂದುದು = ಕೈಯಲ್ಲಿ ನವೆಯಾದುದು.

ಅಂಗೈ ಮುಂಗೈ ಹಿಂಗೈ ಮೇಲುಗೈ ಈ ತರದ ಹಲವು ಪದಗಳಿವೆ. ಇವೆಲ್ಲವೂ ಕಯ್ ಎನ್ನುವ ಬೇರುಪದದ ಸುತ್ತ ಹುಟ್ಟಿದವೇ.

ಕೈನ ನ ಅಡಿ > ಅಂಗೈ ಎನ್ನುವರು (ಅಂಶಿಸಮಾಸ). ಸರಳವಾಗಿ, ಅಡಿಯ ಕೈ > ಅಡಿಗೈ > ಅಂಗೈ ಆಗಿದೆ ಅನ್ನುವೆ.  ಕೊಡುವಾಗ, ಆಣೆ‌ ಇಡುವಾಗ, ನೆಲಕ್ಕೆ ಕೈ ಊರುವಾಗ‌, ವಸ್ತುಗಳನ್ನು ಎತ್ತಿಕೊಳ್ಳುವಾಗ ಕೈನ ಬಿಳಿಭಾಗವನ್ನು ತೆಳಗೆ ಮಾಡುವೆವು.. (ಈ ಬಿಳಿ ಭಾಗದ ಕಡೆಗೇ ಬೆರಳುಗಳು ಮಡುಚುವವು ಹಾಗಾಗಿ). ಹಾಗಾಗಿ ಈ ಕೈನ ಬಿಳಿಬಾಗ ಅಂಗೈ. 

ತೀಂಟೆ, ತಂಟೆ, #ತೀಟೆ, ತೀಟ, ತಿಂತಿ, ತಿಂತೆ, ತೀಂತೆ, ತಿಂದೆ, ತಿಂದೆ, ತೀಂದೆ‌, #ತಿಂಡಿ, ತಿಂಡೆ,  ತಂಟೆ, ಇವುಗಳೆಲ್ಲ "ತೀನ್" ಎಂಬ ಒಂದೇ ಬೇರಿನ ಪದಗಳು. ಇದರ ಹುರುಳು ತುರಿಕೆ, ಕಡಿಯುವಿಕೆ, ಕೆರೆಯುವಿಕೆ, itching, arrogance, ಚೇಷ್ಟೆ ಮುಂತಾದವು. the sensation of itching. (fig.) the tendency of an arrogant person; arrogance.

ನಮ್ಮ ಕಡೆಯ ತಿಂಡಿ ಪದವು "ತಿನ್" ಎಂಬ ಬೇರಿನಿಂದ ಬಂದಿದೆ. ತಿನ್ನು, ತಿನಿಸು, ತಿಂಡಿ (ತಿಂಡಿಯನ್ನು ತಿನ್ನುವೆವು), ತೀನಿ (ಊಟ, ತೀನಿ ತಿನ್ನು) ಮುಂತಾದವು ಈ ಬೇರಿನವು.

"ಯಾಕೆ? ಏನು? ಕೈ ಕಡಿಯುತ್ತಾ?" ಅನ್ನುವ ಬೈಗುಳ ನಮ್ಮ ಕಡೆ‌ ಇದೆ. ಇದಕ್ಕೆ ಸರಿಸಾಟಿಯಾಗಿ ಉತ್ತರಕರ್ನಾಟದ ಭಾಗದಲ್ಲಿ #ತಿಂಡಿ ಎಂಬ ಬಳಕೆ ಇದೆ. ಇದರ ಹುರುಳು ಎಂದರೆ "ತುರಿಕೆ", ನವೆ, ಕಡಿತ. 

ಕಂಗಳು ಕೆತ್ತಿಹವು: 
ಊಟ ಮಾಡುವಾಗ ತುತ್ತು ಕೆಳಗೆಬಿದ್ದರೆ, ಮನೆಮೇಲೆ ಕಾಗೆ ಕೂಗಿದರೆ ನೆಂಟರು ಬರುವರು ಎಂಬ ಶಕುನಗಳುವೆ. ಇದೇ ರೀತಿ ಬಲ ಅಂಗೈ ತುರಿಕೆಯಾದರೆ ಹಣ ಕೈ ಸೇರುತ್ತದೆ ಎನ್ನುವ ನಂಬಿಕೆಯ ಜೊತೆಗೆ ಎಡ ಅಂಗೈ ತುರಿಕೆಯಾದರೆ ಏನೋ ಕೆಟ್ಟ ಶಕುನ ಸಂಭವಿಸಲಿದೆ ಎನ್ನುವ ನಂಬಿಕೆಗಳೂ ಇವೆ.

#ಕೆತ್ತು ಅನ್ನುವ ಪದಕ್ಕೆ ಅದುರು (ಕಣ್ಣು ಅದುರುವವು) ನಡುಗು, ಹಾರು (ಹುಬ್ಬು ಹಾರುವವು) , shiver ಮುಂತಾದ ಹುರುಳಿದೆ. ಕಣ್ + ಕಳು > ಕಣ್‍ಗಳು > ಕಂಗಳು. ಕಂಗಳು ಕೆತ್ತಿಹವಯ್ಯ = ಕಣ್ಣಗಳು ಅದುರುತಿಹವು ಅಯ್ಯ.

ಬಲಗೈ ಕಡಿಯುವುದು, ಬಲಗಣ್ಣು ಹಾರುವುದು ಶುಭಶಕುನ. ಪುರಾತರು, ಶರಣರು, ಶಿವಭಕ್ತರು ಮನೆಗೆ ಬರುವುದರ ಶುಭ ಶಕುನ. ಬಸವಣ್ಣ ಕಂಡ ಕಾಣುವ ಕನಸೂ, ಎದುರು ನೋಡುವುದೂ ಇದೇ. 

ಕಂಡ ಕನಸು, ತೋರಿದ ಶಕುನಗಳು ನಿಜವಾಗಿ ಜಂಗಮ ರೂಪದಲ್ಲಿ ಶರಣರು ಪುರಾತರು ಮನಗೆ ಬಂದರೆ ಅವರಿಂದ ಶಿವಾರ್ಚನೆ ಮಾಡಿಸುವೆ ಎನ್ನುವರು. ಬಸವಧರ್ಮದಲ್ಲಿ ನಾವು ನಮ್ಮ ಎದೆಯಲ್ಲಿ ಕಟ್ಟಿಕೊಂಡ ಲಿಂಗಕ್ಮೂ ನಮಗಿಂತ ದೊಡ್ಡವರು (ಗುರುಗಳು, ಸ್ವಾಮಿಗಳು, ಅಯ್ನರು) ಸಿಕ್ಕಾಗ ಅವರಿಂದಲೂ ಒಂದು ಪೂಜೆ ಮಾಡಿಸುವುದು ಸಂಪ್ರದಾಯ. ಬಸವಣ್ಣ ತನ್ನ ಮೈಮೇಲಿನ ಕೂಡಲಸಂಗಯ್ಯನಿಗೂ ಮನಗೆ ಬಂದ ಜಂಗಮ / ಪುರಾತ / ಶರಣರಿಂದ ಅರ್ಚನೆ ಮಾಡಿಸಲು ಎದುರು ನೋಡುತ್ತಿದ್ದಾರೆ. 

ಕನಸಲ್ಲೂ ಮನಸಲ್ಲೂ ನೆನಪಲ್ಲೂ ಬದುಕಲ್ಲೂ ಬರೀ ಶರಣರೇ ಬಸವಣ್ಣನಿಗೆ!

ಸೋಮವಾರ, ಏಪ್ರಿಲ್ 22, 2024

Meditative Postures / Asanas for Meditation.

ಈ ಕೆಳಗಿನ ಆಸನಗಳನ್ನು meditative postures ಗಳು ಎನ್ನುವರು.

* ಪದ್ಮಾಸನ & ಅರ್ಧಪದ್ಮಾಸನ
* ಸಿದ್ದಾಸನ & ಅರ್ಧಸಿದ್ಧಾಸನ
* ಸುಖಾಸನ
* ವಜ್ರಾಸನ
* ವೀರಾಸನ