ಬುಧವಾರ, ಸೆಪ್ಟೆಂಬರ್ 25, 2024

ಕೊಡನ ತುಂಬಿದ ಹಾಲ ಕೆಡಹಿ, ಉಡುಗಲೆನ್ನಳವೆ

ಮುನ್ನೂರರವತ್ತು ದಿನ ಶ್ರವವ ಮಾಡಿ, ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ?
ಕೊಡನ ತುಂಬಿದ ಹಾಲ ಕೆಡಹಿ, ಉಡುಗಲೆನ್ನಳವೆ ಕೂಡಲಸಂಗಮದೇವಾ? 
- ಬಸವಣ್ಣ - Basavanna 

ಇದು ಭಕ್ತನ #ಭಕ್ತಸ್ಥಲ ದ ವಚನ. ಈ ವಚನದಲ್ಲೂ ಕೂಡ ಭಕ್ತಿಯನ್ನು ಕಾಳಗಕ್ಕೆ ಹೋಲಿಸಿದ್ದಾರೆ. 
ಶ್ರವದ ಉದ್ದೇಶವೇ ಯುದ್ದದಲ್ಲಿ ಗೆಲ್ಲುವುದು. ವರ್ಷಪೂರ್ತಿ ಯುದ್ದಾಭ್ಯಾಸ ಮಾಡಿ ಯುದ್ಧರಂಗದಲ್ಲಿ ಶಸ್ತ್ರ ಬಳಸುವುದನ್ನು ಮರೆತರೆ ಏನು ಪ್ರಯೋಜನ? ಲಿಂಗಾರ್ಚನೆಯ ಉದ್ದೇಶವೇ ಮನ ದೃಡವಾಗುವುದು. ಲೆಕ್ಕವಿಲ್ಲದಷ್ಟು ಕಾಲ ಲಿಂಗಾರ್ಚನೆ ಮಾಡಿ ಮನ ದೃಡವಾಗದಿದ್ದರೆ ಏನು‌ ಪ್ರಯೋಜನ?. ತುಂಬಿದ ಕೊಡದ ಹಾಲನ್ನು ಅಜಾಗರೂಕತೆಯಿಂದ ಚೆಲ್ಲಿ.. ‌ಮತ್ತೆ ಆ ಹಾಲನ್ನು ಮರಳಿ ಬಳಿದು ಕೊಡಕ್ಕೆ ತುಂಬಲು ತನ್ನಿಂದ ಆಗದು‌ ಎನ್ನುವರು ಬಸವಣ್ಣ.

ಒಂದು ಸಣ್ಣ ತಪ್ಪು/ಕೈಮರೆವು /ಮೈಮರೆವು/ಮತಿಮರೆವು ನಿಂದ ಹಿಂದೆ ಮಾಡಿದ ಸಾಧನೆಗಳಲ್ಲಾ ವ್ಯರ್ಥವಾಗುವುದು. ಕೊನೆ ಕ್ಷಣದಲ್ಲಿ ಕೈ ಸೋಲುವ, ಅವಶ್ಯಕತೆ ಬಿದ್ದಾಗಲೇ ನಡೆಸಿದ ತಯಾರಿ ಕೈ ಕೊಡುವುದರ ಬಗ್ಗೆ ಈ ಮಾತುಗಳು. ಇಲ್ಲೆಲ್ಲಾ ಮನಸ್ಸಿನ ದೃಡತೆ ಮುಖ್ಯ. ದೃಡಭಕ್ತಿ, ದೃಡಭಾವ, ದೃಡಚಿತ್ತ, ದೃಡತಪ‌ ಗಳ ಬಗ್ಗೆ ಶರಣರು ಮಾತಾಡುವರು.

ಸಾಧನೆಯ ಹಾದಿಯಲ್ಲಿ ಒಂದು ಕ್ಷಣವೂ ಮೈಮರೆಯಬಾರದು ಎನ್ನುವ ಕಿವಿಮಾತುಗಳಿವೆ ಈ ವಚನದಲ್ಲಿ. ಬುದ್ದಿ ಮಾತುಗಳನ್ನು ತನಗೇನೆ ಅನ್ವಯಿಸಿಕೊಂಡು ಹೇಳುವ ದೊಡ್ಡತನ ಬಸವಣ್ಣನವರದ್ದು. 

ಪದಗಳ ಬಗ್ಗೆ: 
ಮುನ್ನೂರರವತ್ತು:  ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ‌ 360 ದಿನಗಳು. ಬಸವಣ್ಣನ ವಚನವು ಆಗ ಚಾಂದ್ರಮಾನ ‌ಪಂಚಾಂಗದ ಬಳಕೆಯನ್ನು ತೋರುತ್ತಿದೆ. 
ಶ್ರವ‌:  A training in using weapons.
ಕಳ : battle ground, ಅಂಕ, ಯುದ್ದಭೂಮಿ.      ಕಳನೇರಿ : ಕಾಳಗಕ್ಕೆ ಇಳಿದು.
ಕೈಮರೆ : ಕತ್ತಿ/ಗುರಾಣಿ/ಬಿಲ್ಲು/ಬಾಣ/ ಶಸ್ತ್ರ ಗಳನ್ನು ಬಳಸುವುದನ್ನು ಮರೆಯುವುದು.
ಏವು : what to do.  ಏವಯಿಸು : to be dissatisfied; to have displeasure; to sorrow; to feel agony; to grieve.   ಏವೆ : ನೋವು‌ ಪಡುವೆ, ಹೇಗುವೆ
ದೃಡ : firmly established. ಈ ಪದ ಮನಸ್ಸಿನ ಬಗ್ಗೆ. 
ಉಡುಗು : The act or process of brooming; a sweeping. to withdraw - a) to take back or draw back; b) to remove from use; c) to retract or recall.   ಇಡುಗಲು / ಉಡುಗಲು : ಕಸಬರಿಕೆ, broom.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ