ಶುಕ್ರವಾರ, ಮಾರ್ಚ್ 07, 2014

ಬಸವಣ್ಣನವರ ವಚನಗಳಲ್ಲಿ ಪ್ರಣವ

ಪ್ರಣವಾರೂಢನು, ಪ್ರಣವಪ್ರಕೃತಿಸಂಜ್ಞನು,
ಪ್ರಣವಸಂಗಸಮರಸ,
ನಮ್ಮ ಕೂಡಲಸಂಗಮದೇವರು.



ಏನೆಂದುಪಮಿಸುವೆನಯ್ಯಾ
ತನ್ನಿಂದ ತಾ ತೋರದೆ,
ಗುರುಮುಖದಿಂದ ತೋರಿದ ತನ್ನ ನಿಲವ,
ನಿರುಪಮನು.
ಶಬ್ದಮುಗ್ಧವಾಗಿ, ಇದ್ದೆಡೆಯನಿದಿರಿಂಗೆ ತೋರದೆ
ಇರವೆ ಪರವಾಗಿರ್ದ ಅಜಡನು.
ಇನನುದಯಕಾಲಕ್ಕೆ ಕುಕ್ಕುಟ ಧ್ವನಿದೋರುವಂತೆ
ಘನಮಹಿಮರ ದರ್ಶನದಿಂದ ಸತ್ಪ್ರಣವ
ತಾನಾಗಿ ನುಡಿದ ಮೂಲಿಗನು,
ಕೂಡಲಸಂಗಮದೇವರಲ್ಲಿ
ಬೆರೆಸಿ ಬೇರಿಲ್ಲದಿಪ್ಪ ಮರುಳುಶಂಕರದೇವರ ನಿಲವ
ಪ್ರಭುದೇವರು ಸಿದ್ಧರಾಮಯ್ಯದೇವರು
ಹಡಪದಪ್ಪಣ್ಣನಿಂದ ಕಂಡು
ಎನ್ನ ಜನ್ಮ ಸಫಲವಾಯಿತ್ತಯ್ಯಾ.


ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ
ಸೋಡಿಹಂ ಸೋಡಿಹಂ ಎಂದೆನ್ನುತ್ತಿದ್ದಿತ್ತು.
ಕೋಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ
ಇಂತೆಂದುದಾಗಿ,
ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ.



ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ
ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು.
`ಪ್ರಣವ ಓಂ ನಮಃ ಶಿವಾಯ' ಪ್ರಣವ ಓಂ ನಮಃ ಶಿವಾಯ,
ಪ್ರಣವ ಓಂ ನಮಃ ಶಿವಾಯ' ಎಂದುವು ಶ್ರುತಿಗಳೆಲ್ಲಾ.
`ಪ್ರಣವ ಓಂ ಭರ್ಗೋ ದೇವ' ಎಂದುವು ಶ್ರುತಿಗಳೆಲ್ಲಾ.
ಕೂಡಲಸಂಗಯ್ಯನನರಿಯದ ದ್ವಿಜರೆಲ್ಲಾ ಭ್ರಮಿತರು.



ಪಂಚಬ್ರಹ್ಮವ ಕೆಡಿಸಿತ್ತು, ಪ್ರಣವಮಂತ್ರವನೀಡಾಡಿತ್ತಲ್ಲಾ.
ಕರ್ಮಂಗಳನೆ ಕಳೆಯಿತ್ತು, ಕ್ರೀಗಳನೆ ಮೀರಿತ್ತಲ್ಲಾ.
ಆಗಮದ ಹಲ್ಲನೆ ಕಳೆಯಿತ್ತು
ಕೂಡಲಸಂಗಯ್ಯನ ಭಕ್ತಿಗಜ ಹೋ !


ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ನಿರಂಜನದೇವಾ,
ನಿಮ್ಮ ಮಹಿಮೆಯ ಪ್ರಣವಸ್ವರೂಪಂಗಲ್ಲದೆ
ಕಾಣಲಾರಿಗೆಯೂ ಬಾರದಯ್ಯಾ.
ಜ್ಞಾನಜ್ಯೋತಿಧ್ಯಾನದಿಂದ ನಾಳಶುದ್ಧದ್ವಾರವಾಗಿ
ಆರಾಧಿಸಿ ಕಂಡೆ, ನಮ್ಮ ಕೂಡಲಸಂಗಮದೇವನ.

1 ಕಾಮೆಂಟ್‌: