ಭಾನುವಾರ, ಆಗಸ್ಟ್ 25, 2024

ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ

ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ!
ಹಗಲಿರುಳಹುದು, ಇರುಳು ಹಗಲಹುದು!
ಎಂತಯ್ಯಾ! ಆಳವಾಡಿ ಕಳೆವೆನು?
ಒಂದು ಜುಗ ಮೇಲೆ ಕೆಡೆದಂತೆ!
ಕೂಡಲಸಂಗನ ಶರಣರನಗಲುವ ದಾವತಿಯಿಂದ
ಮರಣವೇ ಲೇಸು ಕಂಡಯ್ಯಾ.
-- ಬಸವಣ್ಣ - Basavanna 

"ಕಂಡರೆ" ಮತ್ತು "ಕಾಣದಿದ್ದರೆ" ಎಂಬುವು ಶರಣರ ಬಗೆಗಿನ‌ ಮಾತುಗಳು. ಬಸವಣ್ಣನವರಿಗೆ ಶರಣರನ್ನು ಕಂಡರೆ ಮನೋಹರ, ಕಾಣದಿದ್ದರೆ ಅವಸ್ಥೆ. ಶರಣರನ್ನು ಕಾಣದಿದ್ದರೆ ಹಗಲು‌ ಇರುಳಾಗಿ, ಇರುಳು ಹಗಲಾಗಿ ಕಂಡು, ಎಲ್ಲವೂ ಅಯೋಮಯ ಬಸವಣ್ಣನವರಿಗೆ. ಮಂಕು ಕವಿದಂತಾಗಿ ಮರುಳು ಮಾತುಗಳನ್ನಾಡುತ್ತಾ ಕಾಲ ಕಳೆವಂತಾಗುವುದು, ಯುಗವೇ (ಕಾಲವೇ) ಮೇಲೆ ತಿರುಗಿ ಬಿದ್ದಂತೆ ಅನ್ನಿಸುವುದು. ಶರಣರನ್ನು ಬಿಟ್ಟಿರುವುದಕ್ಕಿಂತ ಮರಣವೇ ಲೇಸು ಎಂಬುದು ಬಸವಣ್ಣನ ಅನುಭವ. ಶರಣರೊಡನೆ ಬೆರೆತು ಕಲೆತು ಬದುಕುವ ಬಸವಣ್ಣನ ಅಪೇಕ್ಷೆ ಬೆಲೆಕಟ್ಟಲಾಗದ್ದು.

--
ಮನೋಹರ ಅನ್ನುವುದಕ್ಕೆ ಹಲವು ಹುರುಳುಗಳನ್ನು ಹೇಳಬಹುದು.
೧. 
ಮನೋಹರ ~ ಮನ: ಹರ.  ಹರ ಎಂದರೆ‌‌ ಇಲ್ಲ ವಾಗಿಸುವುದು. ಲಯಸ್ತಿತಿ. ಯೋಗದ ಗುರಿಯೇ ಮನದ ಲಯ. Thoughtless state. #ಮನೋಹರಸ್ತಿತಿ ಯು ಯೋಗದ ಎತ್ತರದ ನೆಲೆ. ಶಿವನ ನೆಲೆಯೇ. 

೨. ಹರ ಎಂದರೆ ಸೆಳೆಯುವುದು, ಆಕರ್ಷಣೆ. ಮನಸ್ಸನ್ನು ಸೆಳೆಯುವದು. attractive; fascinating; charming; beautiful. ಹಾಗಾಗೇ ಶಿವನು‌ #ಮನೋಹರ.

೩. ಮನೋಹರ ಎಂದರೆ bliss, ಶಿವಾನಂದ.
"ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ #ಮನೋಹರಮೂರ್ತಿ ಇರವಿರಲು" -- ನೀಲಮ್ಮ

೪. 
ಆದಿ ಅನಾದಿಯೆ ಹಾವುಗೆ, ಶುದ್ಧ ಸಿದ್ಧವೆ ಪಾದದ ಜಂಗು,
ಪ್ರಸಿದ್ಧವೆ ಗಮನ, #ಮನೋಹರವೆ ಕಟಿ,
ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ,
ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು ... ಜಕ್ಕಣಯ್ಯ

೫. ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ, ಆರು ಬಾಗಿಲು, ಮೂರು ಮಂಟಪವು, #ಮನೋಹರನೆಂಬ ಪೂಜಾರಿ

ಇನ್ನೂ ಹಲವು ಅರ್ಥಗಳನ್ನು ಹೇಳಬಹುದಾದರೂ‌ ಇಲ್ಲಿ ಮನೋಹರ ಎಂದರೆ ನಲಿವು, ಸುಂದರ , ಸೊಗಸು, attractive; fascinating; charming; beautiful ಎನ್ನುವುದು ಹೊಂದುವುದು.

--
ಅವಸ್ಥೆ ಎಂದರೆ ಪಾಡು, ಇರವು. ವಿಶೇಷವಾದ ಅವಸ್ಥೆ ~ ವ್ಯವಸ್ಥೆ - ಏರ್ಪಾಡು.
"ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ #ಅವಸ್ಥೆ ಮಾಣದು" - ಅಲ್ಲಮ
#ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ, ಕಳೆ ಕಳೆಗಳು ಒಂದಾದ ಪರಿಯ ನೋಡಾ! - ಅಲ್ಲಮ
ಅಂಗದ ಅವಸ್ಥೆಯಲ್ಲದೆ ಲಿಂಗದ #ಅವಸ್ಥೆ ಆರಿಗೂ ಇಲ್ಲ ಗುಹೇಶ್ವರಾ - ಅಲ್ಲಮ
ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. -- ಮುಕ್ತನಾಥಯ್ಯ.

ಅವಸ್ಥೆ ಎಂಬ ಪದಕ್ಕೆ ‌negative ಅರ್ಥಗಳೇ ಸಿಕ್ಕಿರುವಂತಿದೆ. ದುರ್ದೆಸೆ, ಕೆಟ್ಟಸ್ತಿತಿ, ಒಳ್ಳೆಯದಲ್ಲದ ಪಾಡು. ಶರಣರನ್ನು ಕಾಣದಿದ್ದರೆ ಸಹಜವಲ್ಲದ ಪಾಡು ಬಸವಣ್ಣನವರದ್ದು. ಹಗಲು ಇರುಳಂತೆ (ಒಳಗೆ / ಮನಕ್ಕೆ ಮಂಕು, ಹೊರಗೆ ಮೋಡ ಕವಿದು ಕತ್ತಲಾದಂತೆ), ಇರುಳು ಹಗಲಂತೆ (ನಿದ್ದೆ ಬಾರದೆ ಅದೇ ಹಗಲಂತೆ) ಎಲ್ಲವೂ ಅಯೋಮಯವಾದಂತೆ ಬಸವಣ್ಣನವರಿಗೆ.

ಆಳವಾಡು ಎಂದರೆ ಬುಗುಲು ಮಾತು, ತೋರಿಕೆ ಹಾರಿಕೆಯ ಮಾತು, ವಟವಟಮಾತು. ಅಳುತ್ತಾ, ಮರುಗುತ್ತಾ ಇರು.
ಅಳ್ಳಪ a chatterer; ಅಳಪ್ಪು  to chatter, prattle, talk nonsense; ಅಳವಳಿಮೆ babbling;

ಶನಿವಾರ, ಆಗಸ್ಟ್ 24, 2024

ಬಂದಹರಯ್ಯ ಶರಣರೆನ್ನ ಮನೆಗೆ!

ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ. 
ಬಂದಹರಯ್ಯ ಪುರಾತರೆನ್ನ ಮನೆಗೆ!  ಬಂದಹರಯ್ಯ ಶರಣರೆನ್ನ ಮನೆಗೆ! 
ಕಂಡ ಕನಸು ದಿಟವಾಗಿ, ಜಂಗಮ ಮನೆಗೆ ಬಂದರೆ 
ಶಿವಾರ್ಚನೆಯ ಮಾಡಿಸುವೆ ಕೂಡಲಸಂಗಮದೇವಾ ನಿಮ್ಮ ಮುಂದೆ.
          --- ಬಸವಣ್ಣ - Basavanna 

ಅಂಗೈ ತಿಂದುದು = ಕೈಯಲ್ಲಿ ನವೆಯಾದುದು.

ಅಂಗೈ ಮುಂಗೈ ಹಿಂಗೈ ಮೇಲುಗೈ ಈ ತರದ ಹಲವು ಪದಗಳಿವೆ. ಇವೆಲ್ಲವೂ ಕಯ್ ಎನ್ನುವ ಬೇರುಪದದ ಸುತ್ತ ಹುಟ್ಟಿದವೇ.

ಕೈನ ನ ಅಡಿ > ಅಂಗೈ ಎನ್ನುವರು (ಅಂಶಿಸಮಾಸ). ಸರಳವಾಗಿ, ಅಡಿಯ ಕೈ > ಅಡಿಗೈ > ಅಂಗೈ ಆಗಿದೆ ಅನ್ನುವೆ.  ಕೊಡುವಾಗ, ಆಣೆ‌ ಇಡುವಾಗ, ನೆಲಕ್ಕೆ ಕೈ ಊರುವಾಗ‌, ವಸ್ತುಗಳನ್ನು ಎತ್ತಿಕೊಳ್ಳುವಾಗ ಕೈನ ಬಿಳಿಭಾಗವನ್ನು ತೆಳಗೆ ಮಾಡುವೆವು.. (ಈ ಬಿಳಿ ಭಾಗದ ಕಡೆಗೇ ಬೆರಳುಗಳು ಮಡುಚುವವು ಹಾಗಾಗಿ). ಹಾಗಾಗಿ ಈ ಕೈನ ಬಿಳಿಬಾಗ ಅಂಗೈ. 

ತೀಂಟೆ, ತಂಟೆ, #ತೀಟೆ, ತೀಟ, ತಿಂತಿ, ತಿಂತೆ, ತೀಂತೆ, ತಿಂದೆ, ತಿಂದೆ, ತೀಂದೆ‌, #ತಿಂಡಿ, ತಿಂಡೆ,  ತಂಟೆ, ಇವುಗಳೆಲ್ಲ "ತೀನ್" ಎಂಬ ಒಂದೇ ಬೇರಿನ ಪದಗಳು. ಇದರ ಹುರುಳು ತುರಿಕೆ, ಕಡಿಯುವಿಕೆ, ಕೆರೆಯುವಿಕೆ, itching, arrogance, ಚೇಷ್ಟೆ ಮುಂತಾದವು. the sensation of itching. (fig.) the tendency of an arrogant person; arrogance.

ನಮ್ಮ ಕಡೆಯ ತಿಂಡಿ ಪದವು "ತಿನ್" ಎಂಬ ಬೇರಿನಿಂದ ಬಂದಿದೆ. ತಿನ್ನು, ತಿನಿಸು, ತಿಂಡಿ (ತಿಂಡಿಯನ್ನು ತಿನ್ನುವೆವು), ತೀನಿ (ಊಟ, ತೀನಿ ತಿನ್ನು) ಮುಂತಾದವು ಈ ಬೇರಿನವು.

"ಯಾಕೆ? ಏನು? ಕೈ ಕಡಿಯುತ್ತಾ?" ಅನ್ನುವ ಬೈಗುಳ ನಮ್ಮ ಕಡೆ‌ ಇದೆ. ಇದಕ್ಕೆ ಸರಿಸಾಟಿಯಾಗಿ ಉತ್ತರಕರ್ನಾಟದ ಭಾಗದಲ್ಲಿ #ತಿಂಡಿ ಎಂಬ ಬಳಕೆ ಇದೆ. ಇದರ ಹುರುಳು ಎಂದರೆ "ತುರಿಕೆ", ನವೆ, ಕಡಿತ. 

ಕಂಗಳು ಕೆತ್ತಿಹವು: 
ಊಟ ಮಾಡುವಾಗ ತುತ್ತು ಕೆಳಗೆಬಿದ್ದರೆ, ಮನೆಮೇಲೆ ಕಾಗೆ ಕೂಗಿದರೆ ನೆಂಟರು ಬರುವರು ಎಂಬ ಶಕುನಗಳುವೆ. ಇದೇ ರೀತಿ ಬಲ ಅಂಗೈ ತುರಿಕೆಯಾದರೆ ಹಣ ಕೈ ಸೇರುತ್ತದೆ ಎನ್ನುವ ನಂಬಿಕೆಯ ಜೊತೆಗೆ ಎಡ ಅಂಗೈ ತುರಿಕೆಯಾದರೆ ಏನೋ ಕೆಟ್ಟ ಶಕುನ ಸಂಭವಿಸಲಿದೆ ಎನ್ನುವ ನಂಬಿಕೆಗಳೂ ಇವೆ.

#ಕೆತ್ತು ಅನ್ನುವ ಪದಕ್ಕೆ ಅದುರು (ಕಣ್ಣು ಅದುರುವವು) ನಡುಗು, ಹಾರು (ಹುಬ್ಬು ಹಾರುವವು) , shiver ಮುಂತಾದ ಹುರುಳಿದೆ. ಕಣ್ + ಕಳು > ಕಣ್‍ಗಳು > ಕಂಗಳು. ಕಂಗಳು ಕೆತ್ತಿಹವಯ್ಯ = ಕಣ್ಣಗಳು ಅದುರುತಿಹವು ಅಯ್ಯ.

ಬಲಗೈ ಕಡಿಯುವುದು, ಬಲಗಣ್ಣು ಹಾರುವುದು ಶುಭಶಕುನ. ಪುರಾತರು, ಶರಣರು, ಶಿವಭಕ್ತರು ಮನೆಗೆ ಬರುವುದರ ಶುಭ ಶಕುನ. ಬಸವಣ್ಣ ಕಂಡ ಕಾಣುವ ಕನಸೂ, ಎದುರು ನೋಡುವುದೂ ಇದೇ. 

ಕಂಡ ಕನಸು, ತೋರಿದ ಶಕುನಗಳು ನಿಜವಾಗಿ ಜಂಗಮ ರೂಪದಲ್ಲಿ ಶರಣರು ಪುರಾತರು ಮನಗೆ ಬಂದರೆ ಅವರಿಂದ ಶಿವಾರ್ಚನೆ ಮಾಡಿಸುವೆ ಎನ್ನುವರು. ಬಸವಧರ್ಮದಲ್ಲಿ ನಾವು ನಮ್ಮ ಎದೆಯಲ್ಲಿ ಕಟ್ಟಿಕೊಂಡ ಲಿಂಗಕ್ಮೂ ನಮಗಿಂತ ದೊಡ್ಡವರು (ಗುರುಗಳು, ಸ್ವಾಮಿಗಳು, ಅಯ್ನರು) ಸಿಕ್ಕಾಗ ಅವರಿಂದಲೂ ಒಂದು ಪೂಜೆ ಮಾಡಿಸುವುದು ಸಂಪ್ರದಾಯ. ಬಸವಣ್ಣ ತನ್ನ ಮೈಮೇಲಿನ ಕೂಡಲಸಂಗಯ್ಯನಿಗೂ ಮನಗೆ ಬಂದ ಜಂಗಮ / ಪುರಾತ / ಶರಣರಿಂದ ಅರ್ಚನೆ ಮಾಡಿಸಲು ಎದುರು ನೋಡುತ್ತಿದ್ದಾರೆ. 

ಕನಸಲ್ಲೂ ಮನಸಲ್ಲೂ ನೆನಪಲ್ಲೂ ಬದುಕಲ್ಲೂ ಬರೀ ಶರಣರೇ ಬಸವಣ್ಣನಿಗೆ!